ADVERTISEMENT

ಪ್ರೀತಿಯ ಬೆನ್ನೇರಿ ಚೈತನ್ಯ ಪಯಣ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST
ಕೆ.ಎಂ. ಚೈತನ್ಯ
ಕೆ.ಎಂ. ಚೈತನ್ಯ   

‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಸದ್ಯ ಪ್ರೀತಿಯ ಹುಡುಕಾಟದಲ್ಲಿದ್ದಾರಂತೆ. ತಮ್ಮ ಹೊಸ ಧಾರಾವಾಹಿ ‘ಪ್ರೀತಿ ಎಂದರೇನು?’ ಮೂಲಕ ಪ್ರೀತಿಯ ಹುಡುಕಾಟ, ಅದರಲ್ಲಿನ ಹುಡುಗಾಟದ ಜೊತೆಗೆ ಪ್ರೀತಿ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರವನ್ನೂ ಹುಡುಕಲು ಅವರು ಮುಂದಾಗಿದ್ದಾರೆ.

ಚೈತನ್ಯ ನಿರ್ದೇಶನದ ‘ಪ್ರೀತಿ ಎಂದರೇನು?’ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಇದೇ 25ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

ಪ್ರೀತಿ (ಜಾಹ್ನವಿ ಕಾಮತ್) ಮತ್ತು ಅಭಿಷೇಕ್ (ಶೃಂಗ ಬಿ.ಕೆ) ಎಂಬ ಎರಡು ಮುಖ್ಯ ಪಾತ್ರಗಳನ್ನಿಟ್ಟುಕೊಂಡು ಕಥೆ ಹೇಳಲಿದ್ದಾರೆ ಚೈತನ್ಯ. ತಂದೆಯ ಮಾತು ಮೀರದ ಪ್ರೀತಿ ಹಾಗೂ ಅಪ್ಪನ ಮಾತನ್ನೇ ಕಿವಿ ಮೇಲೆ ಹಾಕಿಕೊಳ್ಳದ ಅಭಿ. ಇವರಿಬ್ಬರ ಕಥೆ ನಡೆಯುವುದು ಬೆಂಗಳೂರಿನಲ್ಲಿ. ಬಾಲ್ಯ ಸ್ನೇಹಿತರಾದ ಈ ಇಬ್ಬರ ಒಡನಾಟ, ಅಂತಸ್ತು, ಮನಸ್ಥಿತಿ ಇವುಗಳ ಪರಿಣಾಮವನ್ನೇ ಒಟ್ಟಾಗಿಸಿ ಕಥೆ ಸಿದ್ಧವಾಗಿದೆ. ಕಥೆ ನಡೆಯುವುದು ಬೆಂಗಳೂರಿನಲ್ಲೇ ಆಗಿದ್ದರಿಂದ ಚಿತ್ರೀಕರಣವೂ ಬೆಂಗಳೂರಲ್ಲೇ ನಡೆಯಲಿದೆ.

ಎಂ.ಎನ್. ಜಯಂತ್ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಛಾಯಾಗ್ರಹಣ ಚಂದ್ರು ಅವರದು. ಶಿವಾ ಬೆಳವಾಡಿ, ಸುಜಾತಾ ಅಕ್ಷಯ್, ಚಕ್ರವರ್ತಿ ದಾವಣಗೆರೆ, ರಾಜೇಶ್ ರಾವ್ ಇತರರು ತಾರಾಗಣದಲ್ಲಿದ್ದಾರೆ. ಜಿ.ಎಸ್. ಶಿವರುದ್ರಪ್ಪ ಅವರ ‘ಪ್ರೀತಿ ಎಂದರೇನು’ ಗೀತೆಯನ್ನೇ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನಾಗಿಸಲಾಗಿದೆ. ಎಸ್.ಆರ್. ರಾಮಕೃಷ್ಣ ಅವರು ಈ ಗೀತೆಗೆ ರಾಗ ಸಂಯೋಜಿಸಿದ್ದಾರೆ. ಶರತ್ ಲೋಹಿತಾಶ್ವ ಈ ಹಾಡಿನ ಮೂಲಕ ಮೊದಲ ಬಾರಿ ಗಾಯಕರಾಗಿದ್ದಾರೆ. ಅವರ ಜೊತೆ ಇಂಚರ ಅವರೂ ದನಿ ಸೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.