ADVERTISEMENT

ಮುಂದಿನ ವರ್ಷ 48ರ ಸ್ವಾತಂತ್ರ್ಯ?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಸಾಹಿತಿ ಕುಂ.ವೀರಭದ್ರಪ್ಪ ಅವರ ಹೊಸ ಕಾದಂಬರಿಯೊಂದು ಚಲನಚಿತ್ರವಾಗಲಿದೆ. ಚಿತ್ರದ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಮತ್ತೂ ವಿಶೇಷವೆಂದರೆ ಕುಂ.ವೀ ಅವರು ಇದುವರೆಗೆ ಆ ಕಾದಂಬರಿಯನ್ನೂ ಬರೆದಿಲ್ಲ. ಅವರು ಬರೆಯಲಿರುವ ಹೊಸ ಕಾದಂಬರಿಯೊಂದು ಮದನ್ ಪಟೇಲ್ ಅವರ ನಿರ್ದೇಶನದಲ್ಲಿ ಚಿತ್ರವಾಗಲಿದೆ. ಈ ವಿಷಯ ತಿಳಿಸಲೆಂದೇ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಕಥೆಯನ್ನು ಹೊಸ ಕಾದಂಬರಿ ಆಧರಿಸಿರಲಿದೆ. ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ ಹೈ.ಕ ಭಾಗದ ಜನರಿಗೆ ಸ್ವಾತಂತ್ರ್ಯ ದೊರೆತಿದ್ದು ಒಂದು ವರ್ಷದ ನಂತರ, 1948 ಸೆಪ್ಟೆಂಬರ್ 17ರಂದು. ಈ ಒಂದು ವರ್ಷದ ಅವಧಿಯಲ್ಲಿ ರಜಾಕಾರರು ಆ ಭಾಗದ ಜನರ ಮೇಲೆ ಹೇಗೆಲ್ಲ ದೌರ್ಜನ್ಯ ಮಾಡಿದರು, ಯಾವ ರೀತಿ ಹಿಂಸೆ ಅನುಭವಿಸಿದರು ಎಂಬ ಅಂಶವು ಈ ಕಾದಂಬರಿಯಲ್ಲಿ ಚಿತ್ರಿತವಾಗಲಿದೆ. ಅದಕ್ಕಾಗಿ ಆ ಭಾಗದಲ್ಲಿ ಮದನ್ ಪಟೇಲ್ ಮತ್ತು ಕುಂ.ವೀ ಸಾಕಷ್ಟು ಸುತ್ತಾಡಿದ್ದಾರೆ. ‘ರಜಾಕಾರರ ಆರ್ಭಟ, ಅವರ ವಿರುದ್ಧದ ಹೋರಾಟ ಕಂಡ ಆಗಿನ ಕಾಲದ ಹಿರಿಯರನ್ನು ಕಂಡು ಮಾತನಾಡಿಸಿ ಮಾಹಿತಿ ಸಂಗ್ರಹಿಸಬೇಕು’ ಎಂದರು ಕುಂ.ವೀ. ಚಿತ್ರಕಥೆಯೂ ಕುಂ.ವೀ ಅವರದೇ.

‘ಚಿತ್ರಕ್ಕೆ 48ರ ಸ್ವಾತಂತ್ರ್ಯ ಎಂಬ ಶೀರ್ಷಿಕೆ ಸೂಕ್ತವಾಗಬಹುದು ಎಂದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇದೊಂದು ಮೈಲಿಗಲ್ಲಾಗಲಿದೆ’ ಎಂದು ನಿರ್ದೇಶಕ ಮದನ್ ಪಟೇಲ್ ಹೇಳಿದರು. ಅಲ್ಲಿನ ಭಾಷೆಯ ಅಧ್ಯಯನ, ಆಗಿನ ದಿರಿಸು, ಆಯುಧಗಳ ಸಂಗ್ರಹ ಕಾರ್ಯ ಆರಂಭವಾಗಿದೆ. ಈ ಚಿತ್ರವನ್ನು ಜನತೆಗೆ ತಲುಪಿಸಬೇಕಾದರೆ ಚಿತ್ರರಂಗದಲ್ಲಿ ಈಗಾಗಲೇ ಗುರ್ತಿಸಿಕೊಂಡ ನಟರನ್ನೇ ಹಾಕಿಕೊಳ್ಳಬೇಕು ಎಂಬುದು ಅವರ ಅಭಿಪ್ರಾಯ. 2015ರ ಸೆ.17ಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಜನೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.