ADVERTISEMENT

ವಯಸ್ಸಾಯ್ತು ಅಂದ್ಕೋಬೇಡಿ!; ಅಭಿಮಾನಿಗಳಿಗೆ ಅಂಬರೀಶ್‌ ಪತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 12:49 IST
Last Updated 9 ಡಿಸೆಂಬರ್ 2017, 12:49 IST
ವಯಸ್ಸಾಯ್ತು ಅಂದ್ಕೋಬೇಡಿ!; ಅಭಿಮಾನಿಗಳಿಗೆ ಅಂಬರೀಶ್‌ ಪತ್ರ
ವಯಸ್ಸಾಯ್ತು ಅಂದ್ಕೋಬೇಡಿ!; ಅಭಿಮಾನಿಗಳಿಗೆ ಅಂಬರೀಶ್‌ ಪತ್ರ   

‘ಅಂಬಿ ನಿಂಗ್ ವಯಸ್ಸಾಯ್ತೋ’ ಸುದೀಪ್‌ ಹೀಗೆ ಹೇಳಿದ್ದು, ಅದನ್ನು ಅಂಬರೀಷ್‌ ಅವರೇ ಒಪ್ಪಿಕೊಂಡಿದ್ದು ಎಲ್ಲ ಹಳೆ ಸುದ್ದಿ.

ಗುರುದತ್‌ ಗಾಣಿಗ ನಿರ್ದೇಶಿಸುತ್ತಿರುವ ಅಂಬರೀಷ್‌ ಅವರ ಹೊಸ ಸಿನಿಮಾಕ್ಕೆ ಸುದೀಪ್‌ ಹೀಗೊಂದು ಶೀರ್ಷಿಕೆ ಕೊಟ್ಟ ಮೇಲಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಆದರೆ ಅಂಬರೀಷ್‌ ಈ ಚಿತ್ರದ ಬಗ್ಗೆ ಹೆಚ್ಚೆನೂ ಮಾತಾಡಿರಲಿಲ್ಲ. ಇದೀಗ ಮೌನ ಮುರಿದಿರುವ ಅವರು ತಮ್ಮ ಮನಸ್ಸಿನ ಮಾತುಗಳನ್ನು ಅರುಹುವ ಸಲುವಾಗಿ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

ತಮ್ಮ ಜೀವನ ಮತ್ತು ವೃತ್ತಿಪಯಣದ ಕುರಿತು ಸಂಕ್ಷಿಪ್ತವಾಗಿ ಹೇಳಿಕೊಂಡಿರುವ ಅವರು ಮನೆಮಂದಿಯೆಲ್ಲ ಕುಳಿತು ನೋಡುವಂಥ ಸಿನಿಮಾವನ್ನು ಸದ್ಯದಲ್ಲಿಯೇ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ADVERTISEMENT

‘ಅಂಬಿ ನಿಂಗ್‌ ವಯಸ್ಸಾಯ್ತೋ’ ಸಿನಿಮಾಗೆ ಜಾಕ್ ಮಂಜು ಹಣ ಹೂಡುತ್ತಿದ್ದು, ಕಿಚ್ಚ ಕ್ರಿಯೇಷನ್ಸ್‌ನಲ್ಲಿ ತೆರೆಗೆ ಬರಲಿದೆ. ಸುದೀಪ್ ಜೊತೆಯಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಂಬರೀಶ್ ಜೋಡಿಯಾಗಿ ಸುಹಾಸಿನಿ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ.  ಅಂಬಿ ಪತ್ರವನ್ನೇ ಇಟ್ಟುಕೊಂಡು ಒಂದು ಟೀಸರ್‌ ಅನ್ನೂ ರೂಪಿಸಿದೆ ಚಿತ್ರತಂಡ. ಈ ಟೀಸರ್‌ನಲ್ಲಿ ಅಂಬರೀಷ್‌ ಅವರೇ ಈ ಪತ್ರವನ್ನು ಓದಿ ಹೇಳಿದ್ದಾರೆ.

ಹಾಗಾದರೆ ಅಂಬಿ ತಮ್ಮ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಇರುವುದಾದರೂ ಏನು? ನೀವೇ ಓದಿ... ಇಲ್ಲಿದೆ ಪತ್ರದ ಪೂರ್ಣಪಾಠ.

ಎಲ್ರಿಗು ನಮಸ್ಕಾರ, ಇದೇನಪ್ಪಾ, ಅಂಬರೀಷ್‌ ಅವ್ರು ನಮಸ್ಕಾರ– ನಮಸ್ಕಾರ ಅಂತ ಹೇಳ್ತ ಇದ್ದಾರೆ. ಅವ್ರಿಗೆ ವಯಸ್ಸಾಯ್ತು ಅಂತಾ ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮ ಜತೆ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನಿಸ್ತು. ಅದಕ್ಕೆ ಒಂದು ಕಾರಣಾನೂ ಇದೆ.

ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ ನೀವು ಅನ್ನೋ ಹಾಗೆ ಹುಟ್ಟಿದಾಗ ಅಮರ್‌ನಾಥ್‌ ಆಗಿದ್ದ ನಾನು ಬೆಳಿತಾ ಬೆಳಿತಾ ನಿಮ್ಮ ಅಂಬರೀಷ್‌ ಆದೆ. ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ಲದೆ ನನ್ನೊಳಗೆ ಒಬ್ಬ ಪರಿಪೂರ್ಣ ಕಲಾವಿದ ಬೆಳಿತಾ ಹೋದ. ಹಿಂದಿನ 45 ವರ್ಷಗಳ ಕಾಲ ನೀವು ನನ್ನ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ನೀವು ನನಗೆ ಕೊಟ್ಟ ಬಿರುದು ‘ರೆಬಲ್‌ ಸ್ಟಾರ್‌’.

ಇಷ್ಟಪಟ್ಟ ಹುಡುಗಿ ಜೊತೆ ಮುಂದೆ ಮದುವೆ ಆಯ್ತು. ಮುದ್ದಾದ ಮಗ ಕೂಡ ಹುಟ್ಟಿದ.

ಜೀವನ ನಿಧಾನವಾಗಿ ರಾಜಕೀಯದ ಕಡೆಗೆ ಹಾರಿತು. ಜನಸೇವೆಯನ್ನು ಮಾಡ್ತಾ ಬಂದೆ. ಸಿನಿಮಾ ನಟನೆಯನ್ನೇನು ಬಿಟ್ಟಿರಲಿಲ್ಲ. ಚಿತ್ರರಂಗದ ಆತ್ಮೀಯರು, ಹಿತೈಷಿಗಳು, ಸ್ನೇಹಿತರ ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡ್ತಾ ಇದ್ದೆ. ಸಂತೋಷದ ಜೀವನ ಸಾಗ್ತ ಬಂತು. ಯಾವಾಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದೆ, ಆಗ ನನ್ನೊಳಗಿನ ಕಲೆ ಹಾಗೇ ಇತ್ತು. ಮಾತನಾಡಲು ಶುರು ಮಾಡಿದೆ. ಆಗ ಹುಟ್ಟಿಕೊಂಡಿದ್ದೇ ಈ ಚಡಪಡಿಕೆ. ಒಳ್ಳೆ ಪಾತ್ರಗಳನ್ನ ಮಾಡುವ ಚಡಪಡಿಕೆ. ವಯಸ್ಸಿಗೊಪ್ಪುವ ಪರಿಪೂರ್ಣವಾದ ಪಾತ್ರಗಳನ್ನು ಮಾಡುವ ಚಡಪಡಿಕೆ. ಈ ಹಂತದಲ್ಲಿ ಜೊತೆಯಾದವನು ಮಗನಂತಹ ಗೆಳೆಯ ‘ಸುದೀಪ’.

ಇನ್ನೇನು ಇಬ್ಬರೂ ಸೇರಿಕೊಂಡು ನಿಮ್ಮ ಇಡೀ ಕುಟುಂಬದ ಜೊತೆ ಕುಳಿತು ನೋಡುವ ಚಿತ್ರ ಮಾಡುವುದಕ್ಕಾಗಿ ನಿಶ್ಚಯ ಮಾಡಿದ್ದೀವಿ. ಇನ್ನೇನೂ ತಡ ಇಲ್ಲ, ಆದಷ್ಟೂ ಬೇಗ...

ಇಂತಿ ನಿಮ್ಮ ಪ್ರೀತಿಯ
ಅಂಬರೀಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.