‘ಸಂಹಾರ’ ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾ ದೃಷ್ಟಿ ಕಳೆದುಕೊಂಡಿರುವ ಪ್ರೇಮಿಯಾಗಿ ಕಾಣಿಸಿ ಕೊಂಡಿದ್ದಾರೆ. ಕಣ್ಣು ಕಾಣದಿದ್ದರೂ ಅಡುಗೆ ಮಾಡುವ ಕಲೆ ನಾಯಕನಿಗೆ ಕರಗತ. ರೆಸ್ಟೋರೆಂಟ್ ನಡೆಸುವ ಆತ ಪ್ರೀತಿಗಾಗಿ ಎಂಥದ್ದೇ ಅಪಾಯವನ್ನೂ ಎದುರಿಸಲು ಸಿದ್ಧ. ಈ ಪಾತ್ರ ತಮಗೆ ಹೊಸ ಇಮೇಜ್ ತಂದುಕೊಡಲಿದೆ ಎಂಬುದು ಚಿರು ಹೇಳಿಕೆ.
ಹಾಸ್ಯದ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಚಿಕ್ಕಣ್ಣ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಶೆಟ್ಟಿ ಮತ್ತು ಹರಿಪ್ರಿಯಾ ನಾಯಕಿಯರು. ಜಯಂತ ಕಾಯ್ಕಿಣಿ ರಚಿಸಿರುವ ‘ಏನ್ ಅಚ್ಚರಿಯಾಗಿದೆಯೋ...’ ಗೀತೆಗೆ ನಟ ಪುನೀತ್ ರಾಜ್ಕುಮಾರ್ ಕಂಠದಾನ ಮಾಡಿರುವುದು ಚಿತ್ರದ ಧನಾತ್ಮಕ ಅಂಶ. ನಿರ್ದೇಶಕ ಗುರು ದೇಶಪಾಂಡೆ ಅವರ ಪ್ರಕಾರ ಸಂಗೀತ ನಿರ್ದೇಶಕ ರವಿ ಬಸ್ರೂರು ಹಾಲಿವುಡ್ ಮಾದರಿಯಲ್ಲಿ ಹಿನ್ನೆಲೆ ಸಂಗೀತ ನೀಡಿದ್ದಾರಂತೆ.
‘ಇದಕ್ಕಾಗಿ ಸತತ 10 ದಿನಗಳರೆಗೆ ಸಮಯ ಮೀಸಲಿರಿಸಿದ್ದರು. ಅವರ ಪರಿಶ್ರಮವನ್ನು ಮರೆಯಲಾಗದು’ ಎನ್ನುತ್ತಾರೆ ಅವರು.
ಬೆಂಗಳೂರು, ಮಂಗಳೂರು, ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಎ. ವೆಂಕಟೇಶ್ ಮತ್ತು ಆರ್. ಸುಂದರ ಕಾಮರಾಜು ಬಂಡವಾಳ ಹೂಡಿದ್ದಾರೆ. ನಟ ಧ್ರುವ ಸರ್ಜಾ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಸಹೋದರನ ಚಿತ್ರಕ್ಕೆ ಶುಭ ಹಾರೈಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.