ADVERTISEMENT

ಹೊಸ ಪ್ರತಿಭೆಗಳ ‘ಕಾಮನಬಿಲ್ಲು’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ಕಲರ್ ಕಲರ್ ವಾಟ್ ಕಲರ್‌... ಮಕ್ಕಳ ಪದ್ಯವನ್ನು ಕೇಳಿದ್ದೇವೆ ಅಲ್ಲವೇ. ಈ ಪದ್ಯದ ಮುಂದುವರಿಕೆ ಎನ್ನುವಂತೆ ನಿರ್ದೇಶಕ ಸಾಗರ್ ದಾಸ್ ‘ಕಲರ್‌ಫುಲ್’ ಶೀರ್ಷಿಕೆಯ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

‘ಇಂದಿನ ಯುವ ಸಮುದಾಯ ತಾನು ಮಾಡಿದ್ದೇ ಸರಿ ಎನ್ನುವ ಮನೋಭಾವ ಬೆಳೆಸಿಕೊಂಡಿದೆ. ಅಪ್ಪ, ಅಮ್ಮನ ಮಾತನ್ನು ಕೇಳುವುದಿಲ್ಲ. ಹಿರಿಯರ ಮಾತುಗಳಿಗೆ ಬೆಲೆ ಕೊಟ್ಟರೆ ಜೀವನವೇ ಕಲರ್‌ಫುಲ್. ಇದರ ಜತೆ ಒಂದು ನವಿರಾದ ಪ್ರೀತಿಯ ಸನ್ನಿವೇಶವಿದೆ. ಈ ವಿಷಯವನ್ನು ಮನರಂಜನೆಯ ಚೌಕಟ್ಟಿನಲ್ಲಿ ಹೇಳುತ್ತಿದ್ದೇವೆ. ಎಲ್ಲ ರೀತಿಯ ಬಣ್ಣಗಳು ಜೀವನದಲ್ಲಿ ಇದ್ದರೆ ಚಂದ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ಸಾಗರ್ ದಾಸ್. ಮಂಗಳೂರು, ತೀರ್ಥಹಳ್ಳಿ, ಮಡಿಕೇರಿಯಲ್ಲಿ ‘ಕಲರ್‌ಫುಲ್’ ಸಿನಿಮಾದ ಚಿತ್ರೀಕರಣ ನಡೆಯುತ್ತದೆಯಂತೆ.

ಹಿರಿಯ ಕಲಾ ನಿರ್ದೇಶಕ ದಿನೇಶ್‌ ಮಂಗಳೂರು ಅವರ ಪುತ್ರ ಸೂರ್ಯ ಸಿದ್ದಾರ್ಥ್ ಚಿತ್ರದ ನಾಯಕ. ರಂಗಭೂಮಿ ಮತ್ತು ಕಿರುತೆರೆಯಲ್ಲಿನ ಅನುಭವ ಸಿದ್ದಾರ್ಥ್ ಅವರ ಬೆನ್ನಿಗಿದೆ. ‘ಗೊಂಬೆಗಳ ಲವ್’, ‘ಜಟ್ಟ’ ಮತ್ತು ‘ಜಾಕ್ಸನ್‌’ ಚಿತ್ರಗಳಲ್ಲಿ ನಟಿಸಿದ್ದ ಪಾವನಾ ಹಾಗೂ ರಂಗಭೂಮಿ ನಟಿ ಸನಿಹ ಚಿತ್ರದ ನಾಯಕಿಯರು.

ಚಿತ್ರದಲ್ಲಿ ಏಳು ಹಾಡುಗಳಿದ್ದು ವಿವೇಕ್‌ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಶಂಭುಲಿಂಗಪ್ಪ ‘ಕಲರ್‌ಫುಲ್’ ನಿರ್ಮಾಪಕರು. ನಟ ಶಿವರಾಜ್‌ ಕುಮಾರ್ ಮುಹೂರ್ತದ ವೇಳೆ ಹಾಜರಿದ್ದು ಚಿತ್ರಕ್ಕೆ ಶುಭಕೋರಿದರು.  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.