ADVERTISEMENT

‘ದಿಲ್‌’ ಖುಷ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST
ಶ್ರೀಶ್ರುತಿ, ಅವಿನಾಶ್
ಶ್ರೀಶ್ರುತಿ, ಅವಿನಾಶ್   

ಆಡಿಯೊ ಸಿ.ಡಿಗಳೇ ಮಾರಾಟವಾಗುತ್ತಿಲ್ಲ ಎಂದು ಕನ್ನಡ ಚಿತ್ರರಂಗ ಹೆಣಗಾಡುತ್ತಿರುವಾಗಲೇ ‘ಈ ದಿಲ್ ಹೇಳಿದೆ ನೀ ಬೇಕಂತ’ ಚಿತ್ರದ 25,000 ಆಡಿಯೊ ಸಿ.ಡಿಗಳು ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಈ ಖುಷಿಯನ್ನು ಹಂಚಿಕೊಳ್ಳಲೆಂದೇ ಚಿತ್ರತಂಡವು ‘ಸಿಲ್ವರ್ ಆಡಿಯೊ ಸಿಡಿ’ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿತ್ತು.

ಚಿತ್ರವೊಂದರ ಹಾಡುಗಳ ಹಕ್ಕು ಪಡೆದ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಸಂಭ್ರಮದಲ್ಲಿದ್ದ ಕಾಮಧೇನು ಆಡಿಯೊ ಸಂಸ್ಥೆಯ ಮಾಲೀಕ ಅಮರನಾಥ್‌, ‘ಧ್ವನಿಸುರುಳಿ ಬಿಡುಗಡೆ ಆದಾಗ 25000 ಸಿ.ಡಿ ಮಾರಾಟ ಮಾಡುವ ಗುರಿಯಿಟ್ಟುಕೊಂಡಿದ್ದೆವು. ಹಾಗಂತ ಯಾರಿಗೂ ಉಚಿತವಾಗಿ ನೀಡಿಲ್ಲ’ ಎಂದರು.

‘ಚಿತ್ರದ ಹಾಡು ಖರೀದಿಸಲು ಹಲವು ಆಡಿಯೊ ಸಂಸ್ಥೆಗಳು ಹಿಂದೇಟು ಹಾಕಿದಾಗ ಕಾಮಧೇನು ಸಂಸ್ಥೆ ಹಾಡುಗಳನ್ನು ಖರೀದಿಸಿತು. ಪೈರಸಿ ಹಾವಳಿ ನಡುವೆಯೂ ಈ ಪ್ರಮಾಣದಲ್ಲಿ ಸಿ.ಡಿ ಮಾರಾಟವಾಗಿರುವುದು ಚಿತ್ರಕ್ಕೆ ಶುಭಾರಂಭವೇ ಸರಿ’ ಎನ್ನುತ್ತ ಗೆಲುವಿನಲ್ಲಿದ್ದರು ಸಂಗೀತ ನಿರ್ದೇಶಕ ಸತೀಶ್ ಆರ್ಯನ್.

‘ಹೃದಯಗಳ ವಿಷಯ ಹೀಗೆ ಕಣೊ’ ಎಂಬ ಹಾಡನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸದ ಹತ್ತಿರವಿರುವ ರಾಣಿಝರಿ ಎಂಬಲ್ಲಿ ಚಿತ್ರೀಕರಿಸಲಾಗಿದೆಯಂತೆ. ‘ಆ ಸ್ಥಳದಲ್ಲಿ ಇದುವರೆಗೆ ಮತ್ಯಾರೂ ಚಿತ್ರೀಕರಣ ಮಾಡಿಲ್ಲ. 1300 ಅಡಿ ಆಳದ ಪ್ರಪಾತದ ಅಂಚಿನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದರು ನಿರ್ದೇಶಕ ಕೆ.ಟಿ.ಎಂ.ಶ್ರೀನಿವಾಸ್. ನಾಯಕಿ ಶ್ರೀಶ್ವೇತ ಸ್ವತಃ 50 ಸಿ.ಡಿಗಳನ್ನು ಖರೀದಿಸಿ ಸ್ನೇಹಿತರಿಗೆ ನೀಡಿದ್ದಾರಂತೆ. ಮರ ಸುತ್ತುವ ಕಥೆಗಳಿಗೆ ವಿರುದ್ಧವಾಗಿದ್ದ ನಾಯಕ ಅವಿನಾಶ್ ನರಸಿಂಹರಾಜ್ ಅವರು ಈಗ ಈ ಚಿತ್ರಕ್ಕೆ ಅವಶ್ಯವಿರುವ ಎಲ್ಲ ಭಾವಗಳನ್ನು ಎಕ್ಸ್‌ಪ್ರೆಸ್ ಮಾಡಿದ್ದಾರಂತೆ.

ಸಿ.ಡಿ ಮಾರಾಟದ ಗುಟ್ಟು ಬಿಟ್ಟುಕೊಟ್ಟ ನಿರ್ಮಾಪಕ ಶ್ರೀಧರ್, ‘ಸುಮಾರು ಇನ್ನೂರು ಜನರ ತಂಡ ಕಟ್ಟಿ ಅವರನ್ನು ಸಿ.ಡಿ ಮಾರಾಟದಲ್ಲಿ ತೊಡಗಿಸಿಕೊಂಡೆವು. ರಾಜ್ಯದ ಮೂಲೆಮೂಲೆಯನ್ನು ಭೇಟಿ ಮಾಡಿದ ಈ ವಿನೂತನ ಪ್ರಯತ್ನದಲ್ಲಿ ಅಂದಾಜು 2.5 ಲಕ್ಷ ಜನರನ್ನು ಭೇಟಿ ಮಾಡಿದ್ದೇವೆ’ ಎಂದು ವಿವರಿಸುತ್ತ, ‘ನಮ್ಮ ಪ್ರಾಡಕ್ಟ್‌ ಆದ ಹಾಡುಗಳನ್ನು ಸಮರ್ಥವಾಗಿ ಮಾರ್ಕೆಟಿಂಗ್ ಮಾಡಿದ್ದೇವೆ’ ಎಂದರು. ಮತ್ತೊಬ್ಬ ನಿರ್ಮಾಪಕ ಎಚ್.ಸಿ. ಪ್ರಭಾಕರ್, ಛಾಯಾಗ್ರಾಹಕ ಚಿದಾನಂದ, ಪಿ.ವಿ. ನರಸಿಂಹರಾಜು ಅವರ ಪತ್ನಿ ಶಾರದಮ್ಮ ಸುದ್ದಿಗೋಷ್ಠಿಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.