ಜೀ ಕನ್ನಡ ವಾಹಿನಿಯು ಹೊಸ ವರ್ಷದ ಆರಂಭವನ್ನು ರೈತರೊಂದಿಗೆ ವಿನೂತನವಾಗಿ ಆಚರಿಸಲು ಮುಂದಾಗಿದೆ. ಅನ್ನದಾತರು ದೇಶದ ಬೆನ್ನೆಲುಬು. ಅವರು ನಮ್ಮ ಬಂಧುಗಳು ಎಂಬುದನ್ನು ಹೇಳಲು ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಲ್ಲಿ ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮ ಆಯೋಜಿಸಿದೆ.
ವಾಹಿನಿಯ ಜನಪ್ರಿಯ ಧಾರಾವಾಹಿಗಳ ತಂಡ ಮತ್ತು ರಿಯಾಲಿಟಿ ಷೋಗಳ ತಂಡಗಳು ಜೊತೆಯಾಗಿ ಭಾಗವಹಿಸಲಿವೆ. ‘ಜೋಡಿಹಕ್ಕಿ’, ‘ಸುಬ್ಬಲಕ್ಷ್ಮಿ ಸಂಸಾರ’, ‘ಯಾರೇ ನೀ ಮೋಹಿನಿ’, ‘ವಿದ್ಯಾ ವಿನಾಯಕ’, ‘ನಾಗಿಣಿ’ ಮತ್ತು ‘ಬ್ರಹ್ಮಗಂಟು’ ಧಾರಾವಾಹಿ ತಂಡಗಳ ಜೊತೆ ಸರಿಗಮಪ, ಕಾಮಿಡಿ ಕಿಲಾಡಿಗಳು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ತಂಡಗಳು ಭಾಗವಹಿಸಲಿವೆ. ಬಸವಟ್ಟಿ ಮತ್ತು ನಯನಾ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಈ ಸಂಭ್ರಮದ ಜೊತೆಗೆ ರಿಯಾಲಿಟಿ ಷೋ ತಂಡದಿಂದ ರೈತರ ಕುಟುಂಬಗಳಿಗಾಗಿ ಜನವರಿ 14ರಂದು 'ಸಂಕ್ರಾಂತಿ ಗೋ ಉತ್ಸವ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುಗ್ಗಿ ಹಬ್ಬದ ಸಡಗರದಲ್ಲಿ ಹಸುಗಳ ಅಲಂಕಾರ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ರೈತ ಕುಟುಂಬದವರು ತಾವು ಸಾಕಿರುವ ಹಸುವನ್ನು ವಿಶೇಷವಾಗಿ ಅಲಂಕಾರ ಮಾಡಿಕೊಂಡು ತರಬೇಕು.
ಈ ಸ್ಪರ್ಧೆಯು ಹಾಸನ, ಚಾಮರಾಜನಗರ, ಶಿವಮೊಗ್ಗ ಮತ್ತು ತುಮಕೂರಿನ ಪ್ರಮುಖ ಗ್ರಾಮಗಳಲ್ಲಿ ನಡೆಯಲಿದೆ. ಸ್ಪರ್ಧೆ ಮೂಲಕ ಗೋ ಮಾತೆಗೆ ನಮನ ಸಲ್ಲಿಸುವುದು ವಾಹಿನಿಯ ಉದ್ದೇಶ.
‘ರೈತಾಪಿ ಜನರನ್ನಷ್ಟೇ ಅಲ್ಲದೆ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯ, ಪ್ರಕೃತಿ, ಹಬ್ಬದ ವಾತಾವರಣವನ್ನು ಕಿರುತೆರೆ ವೀಕ್ಷಕರಿಗೆ ಪರಿಚಯಿಸುವ ಗುರಿ ಹೊಂದಲಾಗಿದೆ. ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಇದೇ 14ರ ಸಂಜೆ 5ಕ್ಕೆ ಪ್ರಸಾರವಾಗಲಿದೆ’ ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.