ADVERTISEMENT

ಮನಸೆಳೆವ ಸಂಗೀತದ ಮಧ್ಯೆ ಜೀ ಮ್ಯೂಸಿಕ್ ಅವಾರ್ಡ್ಸ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2015, 19:30 IST
Last Updated 15 ಜುಲೈ 2015, 19:30 IST
ಜೀ ಮ್ಯೂಸಿಕ್ ಅವಾರ್ಡ್ಸ್‌ ಕಾರ್ಯಕ್ರಮದ ಒಂದು ದೃಶ್ಯ
ಜೀ ಮ್ಯೂಸಿಕ್ ಅವಾರ್ಡ್ಸ್‌ ಕಾರ್ಯಕ್ರಮದ ಒಂದು ದೃಶ್ಯ   

ಜೀ ಕನ್ನಡ ವಾಹಿನಿ ಆಯೊಜಿಸಿದ್ದ ಜೀ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮ ಕೆಂಗೇರಿಯ ಬಿ.ಜಿ.ಎಸ್. ಸಭಾಂಗಣದಲ್ಲಿ  ನಡೆಯಿತು. ಅಂತರರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಗೀತಗಾರರಾದ ರಿಕ್ಕಿ ಕೇಜ್‌, ರಘು ದೀಕ್ಷಿತ್‌ ಅವರಂಥ ಸಾಧಕರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಹಲವಾರು ದಶಕಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಲಹರಿ ಸಂಸ್ಥೆಗೆ ಕೂಡ ಈ ಸಂದರ್ಭದಲ್ಲಿ  ಗೌರವಿಸಲಾಯಿತು. ಅಲ್ಲದೆ ಸುಗಮ ಸಂಗೀತ ಕ್ಷೇತ್ರದ ಮಾಣಿಕ್ಯ ಎನಿಸಿಕೊಂಡಿರುವ ದಿ. ಸಿ. ಅಶ್ವತ್ಥ್‌ ಅವರಿಗೆ ಸುಗಮ ಸಂಗೀತ ಸಾಮ್ರಾಟ್ ಎಂಬ ಬಿರುದು ನೀಡಿ, ಅಶ್ವತ್ಥ್‌ ಕುಟುಂಬವನ್ನು ಕೂಡ ಸನ್ಮಾನಿಸಲಾಯಿತು.

ಸಂಗೀತ ನಿರ್ದೇಶಕರು, ಗೀತ ರಚನೆಕಾರರು ಹಾಗೂ ಸಂಗೀತ ಪ್ರೇಮಿಗಳು ಕೂಡ ಈ  ಸಮಾರಂಭದಲ್ಲಿ ಭಾಗವಹಿಸಿದ್ದರು. ನಟ ರಮೇಶ್ ಅರವಿಂದ್ ಅವರ ನಿರೂಪಣೆ, ಅರುಣ್ ಸಾಗರ್ ಮತ್ತು ಅನುಶ್ರೀ ಅವರ ನವಿರಾದ ಹಾಸ್ಯದ ಮಾತುಗಳು  ಸಮಾರಂಭಕ್ಕೆ ಹೆಚ್ಚಿನ ಕಳೆ ನೀಡಿತು.

ನಟಿ ರಚಿತಾ ರಾಮ್‌ ಹಾಸ್ಯನಟ ಚಿಕ್ಕಣ್ಣ, ನಟಿ ಶ್ರುತಿ ಹರಿಹರನ್ ಅವರ ವಿಶೇಷ ನೃತ್ಯ, ಸ್ಟಿಫನ್ ದೇವಸ್ಸಿ, ಪ್ರವೀಣ ಗೋಡ್ಖಿಂಡಿ, ಮಂಜುನಾಥ್ ಅವರ ಜುಗಲ್ ಬಂದಿ, ರಘು ದೀಕ್ಷಿತ್, ಹೇಮಂತ್, ನಂದಿತಾ, ಅರ್ಚನಾ ಉಡುಪ, ಚೇತನ್, ಚಿನ್ಮಯ್, ಎಲ್‌.ಎನ್.ಶಾಸ್ತ್ರಿ, ಚೈತ್ರಾ ಅವರ ಇಂಪಾದ ಗಾಯನ ನೆರೆದಿದ್ದವರ ಮನವನ್ನು ಸೂರೆಗೊಂಡಿತು. ಹೊಸದಾಗಿ ಪ್ರಾರಂಭವಾಗುತ್ತಿರುವ ಕಾರ್ಯಕ್ರಮ ‘ಸರೆಗಮಪ’ಕ್ಕೆ   ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಚಾಲನೆ ನೀಡಿದರು.

ಹಿರಿಯ ನಿರ್ದೇಶಕ ಕೆ.ಎಸ್.ಎಲ್‌. ಸ್ವಾಮಿ, ಎಸ್. ನಾರಾಯಣ, ನಂದಿತಾ ಮತ್ತು ಎಂ.ಡಿ. ಪಲ್ಲವಿ ಜ್ಯೂರಿಗಳಾಗಿ ಕಾರ್ಯನಿರ್ವಹಿಸಿದರು. ಕ್ರೇಜಿಸ್ಟಾರ್ ರವಿಚಂದ್ರನ್, ವಿಜಯ ರಾಘವೇಂದ್ರ, ಪೂಜಾ ಗಾಂಧಿ, ನೀತು, ನಂದಕಿಶೊರ್ ಇನ್ನಿತರ ಕಲಾವಿದರು ಸಮಾರಂಭದಲ್ಲಿ ಅತಿಥಿಗಳಾಗಿದ್ದರು. ಇದೇ 18 ಹಾಗೂ 19ರಂದು ಜೀ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.