ADVERTISEMENT

ಸುವರ್ಣ ಸಮಾಗಮದಲ್ಲಿ ‘ಮಿಲನ’ ಮತ್ತು ‘ಅನುರೂಪ’

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST
ಅನುರೂಪ ಧಾರಾವಾಹಿಯ ಮೇಘನಾ ಹಾಡಿಗೆ ಹೆಜ್ಜೆ ಹಾಕುತ್ತಿರುವುದು
ಅನುರೂಪ ಧಾರಾವಾಹಿಯ ಮೇಘನಾ ಹಾಡಿಗೆ ಹೆಜ್ಜೆ ಹಾಕುತ್ತಿರುವುದು   

ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮ ಹಾಗೂ ಧಾರಾವಾಹಿಗಳನ್ನು ಕಿರುತೆರೆಗೆ ನೀಡುತ್ತಿರುವ  ಸ್ಟಾರ್ ನೆಟ್‌ವರ್ಕ್‌ನ ಸುವರ್ಣ ವಾಹಿನಿಯು ವಿಶೇಷವಾಗಿ ಧಾರಾವಾಹಿಗಳ ಕಥೆ ಸಾಗುತ್ತಿರುವಾಗ ವೀಕ್ಷಕರೊಂದಿಗೆ ನೇರ ಸಮಾಗಮ, ಸಂಭಾಷಣೆ ಚರ್ಚೆಗಳನ್ನು ನಡೆಸುತ್ತಾ ಬಂದಿದೆ.

ವೀಕ್ಷಕರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ಕಥೆಯನ್ನು ಮುಂದುವರಿಸುವ ಹೊಣೆ ಹೊತ್ತಿರುವ ವಾಹಿನಿಯು ಇತ್ತೀಚೆಗೆ ಹುಬ್ಬಳ್ಳಿ ಮತ್ತು ಧಾರಾವಾಡದಲ್ಲಿ ಆಯೋಜಿಸಿದ್ದ ಮಿಲನ ಮತ್ತು ಅನುರೂಪ ಧಾರಾವಾಹಿಗಳ ಸುವರ್ಣ ಸಮಾಗಮ ಕಾರ್ಯಕ್ರಮ ವಿಜೃಂಭಣೆಯಿಂದ ಸಾಗಿ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಸುವರ್ಣ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುವ ‘ಮಿಲನ’ ಮತ್ತು ‘ಅನುರೂಪ’ ಧಾರಾವಾಹಿಗಳು ಕ್ರಮವಾಗಿ 120 ಮತ್ತು 555 ಕಂತುಗಳನ್ನು ಪೂರೈಸಿರುವ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹುಬ್ಬಳ್ಳಿ ಮತ್ತು ಧಾರಾವಾಡದ ಅಭಿಮಾನಿಗಳು ಎರಡು ಧಾರಾವಾಹಿಗಳ ತಂಡದವರನ್ನು ಬೃಹತ್ ರೋಡ್ ಶೋ ಮಾಡುವುದರ ಮೂಲಕ ಸ್ವಾಗತಿಸಿದರು. ಕಲಾವಿದರ ಸ್ವಾಗತಕ್ಕಾಗಿ ರಸ್ತೆಗಳನ್ನು ರಂಗೋಲಿ, ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದು ವಿಶೇಷವಾಗಿತ್ತು. ಶ್ಯಾಮ್ ಮತ್ತು ಮೇಘನಾಳ ಸೈಕಲ್ ಸವಾರಿ ಮುಗಿದ ನಂತರ ಎರಡು ಧಾರಾವಾಹಿಗಳ ತಂಡದವರು ಧಾರವಾಡದ ಅಭಿಮಾನಿಗಳ ಜೊತೆ ಕುಣಿದು  ಕುಪ್ಪಳಿಸಿದರು. ಇದೇ ವೇಳೆ  ಅಭಿಮಾನಿಯೊಬ್ಬರು ತಮ್ಮ ಹುಟ್ಟು ಹಬ್ಬವನ್ನೂ ಆಚರಿಸಿಕೊಂಡರು.

‘ಮಿಲನ’ ಧಾರಾವಾಹಿಯ ಅಂಜನ್, ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿ ವೇದಿಕೆಗೆ ಆಗಮಿಸಿದರು. ನಂತರ ಸಮರ್ಥ ಮತ್ತು ಪ್ರಾರ್ಥನಾ ಜೋಡಿ, ಸಮರ್ಥ ಮತ್ತು ಅರ್ಥ, ತೇಜಸ್ವಿ ಹಾಗೂ ಮೇಘನಾ, ಶ್ಯಾಮ್ ಮತ್ತು ಸುನೈನಾ ಹಾಗೂ ಸಂಜಯ್ ಮತ್ತು ಸಂಧ್ಯಾ ಜೋಡಿಗಳು ಒಂದೊಂದು ಹಾಡಿಗೆ ಹೆಜ್ಜೆ ಹಾಕಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಭರ್ಜರಿಯಾಗಿ ಮೂಡಿಬಂದ ಕಾರ್ಯಕ್ರಮದಲ್ಲಿ  ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಪ್ರಸಾರವನ್ನು ವಾಹಿನಿಯು ಮೇ 31ರ  ಸಂಜೆ 5.30ಕ್ಕೆ ಪ್ರಸಾರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT