ಮಲೆನಾಡಿನಲ್ಲಿ ಮಳೆಗಾಲ ನಾಂದಿ ಹಾಡಿತೆಂದರೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವವರಿಗೆ ಕಳಲೆ ಪ್ರಿಯರ ಸಾಮಾನ್ಯ ಪ್ರಶ್ನೆ ‘ಕಳಲೆ ಮೂಡಿದ್ಯೆನೋ....’ ಎನ್ನುವುದು. ಕಳಲೆಯು ಬಿದಿರಿನ ಹಿಂಡಿನಿಂದ ಹುಟ್ಟಿ ಬರುವ ಎಳೆ ಸಸ್ಯ. ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳಿಬ್ಬರೂ ಇಷ್ಟಪಡುವ ಕಳಲೆಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಹಾಗಾಗಿಯೇ ‘ಉಂಡಮನೆಯ ಗಳ ಲೆಕ್ಕ ಮಾಡಿದ’ ಎನ್ನುವ ಗಾದೆಮಾತು ಚಾಲ್ತಿಯಲ್ಲಿದೆ.
ಬಹಳ ವೇಗವಾಗಿ ಬೆಳೆಯುವ ಬಿದಿರು ಮಾನವನಿಗೆ ಹುಟ್ಟಿನಿಂದ ಸಾಯುವವರೆಗೂ ಬೇಕಾಗುವಂಥದ್ದು. ಒಂದರಿಂದ ಒಂದೂವರೆ ಅಡಿಯಷ್ಟು ಎತ್ತರದ, ಬಿದಿರಿನ ಮೊಳಕೆಯಿಂದ (ಕಳಲೆ) ವಿವಿಧ ಖಾದ್ಯಗಳನ್ನು ಮಲೆನಾಡಿನ ಜನ ಸಿದ್ಧಪಡಿಸುತ್ತಾರೆ. ಬಿದಿರು ಬೆಳೆಯುವ ಪ್ರದೇಶದ ಜನರ ಮಳೆಗಾಲದ ಒಂದು ಆಹಾರ ಈ ಕಳಲೆ.
(ಕಳಲೆ ಪಲ್ಯ)
ಬಿದಿರಿನ ಮೊಳಕೆಯನ್ನು ಸುಲಿದು ಸಣ್ಣದಾಗಿ ಕತ್ತರಿಸಿ ಒಂದು ರಾತ್ರಿ ಉಪ್ಪುನೀರಲ್ಲಿ ನೆನೆಸಿ ಇಡುತ್ತಾರೆ. ಅನಂತರ ಖಾದ್ಯಕ್ಕೆ ತಕ್ಕಹಾಗೆ ಕತ್ತರಿಸಿ ಅಡುಗೆ ಸಿದ್ಧಪಡಿಸುತ್ತಾರೆ. ಮಾಂಸಾಹಾರಿಗಳು ಕಳಲೆಯ ಜೊತೆಗೆ ಹಸಿ ಮತ್ತು ಒಣ ಸಿಗಡಿ, ಒಣಗಿಸಿದ ಚಿಪ್ಪಿಕಲ್ಲಿನ ಮಾಂಸ, ಬುಗಸಿ (ಒಣಗಿಸಿದ ಅತಿ ಚಿಕ್ಕ ಮೀನು) ಮುಂತಾದವುಗಳನ್ನು ಬಳಸುತ್ತಾರೆ. ಕಳಲೆಯಿಂದ ಪಲ್ಯ, ಸಾರು, ವಡೆ, ಫ್ರೈ, ಹಸಿ, ಹುಳಗಾ, ಉಪ್ಪಿನ ಕಾಯಿ ಮುಂತಾದವುಗಳನ್ನು ತಯಾರಿಸುತ್ತಾರೆ.
ಕಳಲೆಯನ್ನು ಮಾವಿನ ಮಿಡಿ ಕಾಪಾಡುವಂತೆ ಉಪ್ಪು ನೀರಿನಲ್ಲಿಟ್ಟು ವರ್ಷಪೂರ್ತಿ ಬಳಸುತ್ತಾರೆ. ವರ್ಷದಲ್ಲಿ ಒಮ್ಮೆಯಾದರೂ ಕಳಲೆ ತಿಂದರೆ ಆರೋಗ್ಯಕ್ಕೆ ಹಿತ ಎಂಬುದು ಕಳಲೆ ಪ್ರಿಯರ ನಂಬಿಕೆ.
ಕಳಲೆಯ ಮೇಲೆ ಅರಣ್ಯ ಇಲಾಖೆಯವರ ಕಣ್ಣು ಬಿದ್ದಿದೆ. ಮೊದಲಿನಂತೆ ಕಳಲೆಯ ಮಾರಾಟ ಈಗ ಕಾಣಿಸದು. ಶತಮಾನಗಳಿಂದಲೂ ಕಳಲೆ ನಮ್ಮ ಆಹಾರದ ಒಂದು ಭಾಗ ಎನ್ನುವುದು ಕಳಲೆ ಪ್ರಿಯರ ಅಂಬೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.