ADVERTISEMENT

‘ಅರ್ಥ’ಪೂರ್ಣ ಈ ಬದುಕು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST

ಜೀವನ ಎನ್ನುವುದು ಅಸಹನೀಯ ಸಂದರ್ಭಗಳಿಂದಾದುದಲ್ಲ, ಜೀವನಕ್ಕೆ ಅದರದ್ದೇ ಆದ ಅರ್ಥ ಹಾಗೂ ಉದ್ದೇಶವಿದೆ. ಜೀವನದಲ್ಲಿ ಬರಿ ಖುಷಿಯನ್ನಷ್ಟೇ ಹುಡುಕುವುದು ಜೀವನವಲ್ಲ. ಬದುಕಿನಲ್ಲಿ ಖುಷಿಯಾಗಿರಬೇಕು ಎಂದುಕೊಂಡು ಕೆಲವರು ಏನೇನೋ ಮಾಡುತ್ತಾರೆ. ಖುಷಿಯನ್ನು ಹುಡುಕುವ ಭರದಲ್ಲೇ ತಾನು ಬದುಕನ್ನು ಕಳೆದುಕೊಂಡಿದ್ದೇನೆ ಎಂಬುದು ಅವರ ಅರಿವಿಗೆ ಬರುವ ಹೊತ್ತಿಗೆ ಬರುವ ಅವರು ನಿಜವಾದ ಜೀವನವನ್ನೇ ಕಳೆದುಕೊಂಡಿರುತ್ತಾರೆ. ಬದುಕಿನಲ್ಲಿ ನಮ್ಮ ಸುತ್ತಮುತ್ತಲೂ ಇರುವ ವ್ಯಕ್ತಿಗಳಿಂದಲೂ ವಸ್ತುಗಳಿಂದಲೂ ಪ್ರತಿ ಕ್ಷಣವೂ ನಮಗೆ ಖುಷಿ ಸಿಗುತ್ತಿರುತ್ತದೆ. ಆದರೆ ಖುಷಿಯನ್ನು ಎಲ್ಲೋ ದೂರದಲ್ಲಿ ಹುಡುಕುವ ನಾವು ನಮ್ಮ ಸನಿಹದಲ್ಲಿಯೇ ಅದು ಇದೆ ಎನ್ನುವುದನ್ನು ಗುರುತಿಸಲು ಸೋತಿರುತ್ತೇವೆ.

ಈ ಬದುಕು ಸುಂದರವಾಗಿದೆ ಎಂದು ಕಾಣಬಲ್ಲ ನೋಟವನ್ನು ಮೊದಲು ನಾವು ಪಡೆಯಬೇಕು. ಆಗ ಬದುಕು ಅರ್ಥಪೂರ್ಣವಾಗಿಯೇ ಸಾಗುತ್ತದೆ. ಬದುಕಿನ ಸಾರ್ಥಕತೆ ಇರುವುದು ಪ್ರತಿ ಕ್ಷಣ ನಾವು ಅದನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರಲ್ಲಿ. ಆಯಾ ಕ್ಷಣದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದೇ ನಿಜವಾದ ಜೀವನಪ್ರಯಾಣ. ಪ್ರಾಮಾಣಿಕವಾಗಿ ಸ್ಪಂದಿಸುವುದು ಎಂದರೆ ಪ್ರಕೃತಿಯೊಂದಿಗೆ ಸಹಜವಾಗಿಯೂ ಸುಲಭವಾಗಿಯೂ ಹೆಜ್ಜೆ ಹಾಕುವುದು ಎಂದು. ’ಪ್ರಕೃತಿಯಲ್ಲಿ ನಾನೂ ಒಬ್ಬ’ ಎಂಬ ಅರಿವು ಇರುವವರೆಗೂ ಇಂಥ ಸಹಜತೆ ಸಾಧ್ಯವಾಗುತ್ತದೆ; ಹೀಗಲ್ಲದೆ ‘ನಾನೊಬ್ಬನೇ’, ‘ನನಗಾಗಿಯೇ’ ಎಂಬ ಅಹಂಕಾರ ಎಚ್ಚರವಾಗದರೆ ಆಗ ಸಹಜತೆ ಮಾಯವಾಗಿ ಬರಿ ವಿಕಾರಗಳೇ ಮೂಡುತ್ತವೆ. ಈ ವಿಕಾರದ ಮುಖವೇ ಸ್ವಾರ್ಥ. ಅದನ್ನು ತೃಪ್ತಿ ಪಡಿಸಲು ನೂರಾರು ಅಡ್ಡದಾರಿಗಳ ಕಡೆಗೆ ಮನಸ್ಸು ತಿರುಗತ್ತದೆ. ಹಣದಾಸೆಯೂ ಅಂಥ ವಿಕಾರಗಳಲ್ಲಿ ಒಂದು.

ಬದುಕಿನಲ್ಲಿ ಹಣವಷ್ಟೇ ಮುಖ್ಯ ಎಂದುಕೊಳ್ಳುತ್ತೇವೆ. ಹಣವೇ ಬದುಕಿಗೆ ಅರ್ಥ ಹಾಗೂ ಖುಷಿ ಎಂದು ಭ್ರಮಿಸುತ್ತೇವೆ. ಜೀವನದಲ್ಲಿ ಬದುಕಲು ಹಣ ಬೇಕೆ ಹೊರತು, ಹಣವೇ ಬದುಕಲ್ಲ. ಹಣದ ಹಿಂದೆ ಬಿದ್ದು ಅನಾಚಾರಗಳಲ್ಲಿ ತೊಡಗಿ ಬದುಕಿನ ನಿಜವಾದ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆಯಷ್ಟೆ. ಹಿತವಾದ, ಮಿತವಾದ ಜೀವನವಿಧಾನದಲ್ಲಿಯೇ ಬದುಕಿನ ಖುಷಿಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.