ADVERTISEMENT

ಕೋಪದ ಕೂಪದಿಂದ ಹೊರಬನ್ನಿ

ಮಹಾದೇವ ಬಸರಕೊಡ ಅಮೀನಗಡ, ಹುನಗುಂದ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

‘ಕೋಪವು ಶೋಕದ ಮೃದುವಾದ ಮತ್ತು ತೀವೃವಾದ ಪ್ರಕಟವಾಗುವಿಕೆ’ ಎಂಬುದು ಪ್ರಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್‌ಫ್ರಾಯ್ಡ್ ಅವರ ಶಿಷ್ಯ ಉಸ್ತಾಂಗೆಯೇಂಗ  ವಿವರಣೆ.  ನೆರವೇರದ ಆಸೆಗಳು, ಈಡೇರದ  ನಿರೀಕ್ಷೆಗಳು, ಕನಸುಗಳು, ಮನದಾಳದಲ್ಲಿ ಶೋಕವಾಗಿ ಪರಿವರ್ತಿತವಾಗಿ ಸಾಂದರ್ಭಿಕವಾಗಿ ತಿವೃವಾಗಿ ಪ್ರಕಟಿತವಾಗಿ ಕೋಪದ ರೂಪದಲ್ಲಿ ಹೊರಹೊಮ್ಮಿ ತನಗೂ ಮತ್ತು ಇತರರಿಗೂ ಹಾನಿಯನ್ನುಂಟು ಮಾಡುತ್ತವೆ.

ನಮ್ಮ ವ್ಯಕ್ತಿತ್ವಕ್ಕೆ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೋಪ ಹೊರಹೊಮ್ಮುವುದು ಸಹಜವೇ ಆಗಿದ್ದರೂ ಅದು ಕೂಡ ನಮ್ಮ ನೆರವೇರದ ಆಸೆಯಿಂದ ಪರಿವರ್ತಿತವಾದ ಶೋಕದ ರೂಪವೇ ಅಲ್ಲದೆ ಬೇರೇನೂ ಅಲ್ಲ ಎಂಬುದು ಗಮನಿಸಬೇಕಾದ ಸಂಗತಿಯೇ ಆಗಿದೆ. ಕೆಲವು ಬಾರಿ ಕೋಪವು ಸಕಾರಣವಿಲ್ಲದೆಯೂ ಸ್ಫೋಟಗೊಂಡು ಅಪಾರ ಪ್ರಮಾಣದಲ್ಲಿ ಆಂತಕ, ಭಯದ ವಾತಾವರಣನ್ನು ನಿರ್ಮಿಸುತ್ತದೆ. ಎಲ್ಲ ಜೀವಿಗಳಲ್ಲೂ ಕೋಪ ಸಾಮಾನ್ಯವಾದರೂ ಮನುಷ್ಯನ ಕೋಪ ಮಾತ್ರ ಅವನ ಬದುಕನ್ನು ಅಧೋಗತಿಗೆ ತಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಮಾತ್ರ ಸತ್ಯ.

ಒಂದು ಕ್ಷಣದ ಕೋಪದಲ್ಲಿ ಹೊರಹೊಮ್ಮುವ ಮಾತುಗಳು, ವರ್ತನೆಗಳು ಸಾವಿರಾರು ವರ್ಷದ ಸಂಬಂಧಗಳನ್ನು, ಸ್ನೇಹಗಳನ್ನು ನಿರ್ನಾಮ ಮಾಡಿ ಬಿಡಬಲ್ಲವು. ಅಂತಯೇ ಪರರು ಕೋಪಿಸಿಕೊಂಡಾಗಲೂ, ಅನೇಕ ಒತ್ತಡಗಳ, ಸಂಕಷ್ಟಗಳ ಪ್ರವಾಹ ಎದುರಿಸಿದಾಗಲೂ ನಾವು ತಾಳ್ಮೆಯಿಂದ ವರ್ತಿಸುವುದು ಜಾಣತನವಾಗಿದೆ. ಇಲ್ಲದಿದ್ದರೆ ಮನುಷ್ಯನ ವಿವೇಚನೆಯ ಸುತ್ತ ಕೋಪದ ಕೂಪ ನಿರ್ಮಾಣವಾಗಿ ವ್ಯಕ್ತಿ ತನ್ನ ಬದುಕಿನ ಅಂತ್ಯಕ್ಕೆ ತಾನೇ ನಾಂದಿಯಾಗುವುದು ನಿಶ್ಚಿತ. ಅಂತೆಯೇ ಬಸವಣ್ಣ

‘ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಚೇಗೇಯೇನು?
ತನುವಿನ ಕೋಪ ತನ್ನ ಹಿರಿತನದ ಕೇಡು,
ಮನದ ಕೋಪ ತನ್ನಅರಿವಿನ ಕೇಡು,
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆ ಮನೆಯ ಸುಡುವುದೆ ಕೂಡಲ ಸಂಗಮದೇವಾ’.

ಎಂದು, ಕೋಪದ ಕೂಪದಲ್ಲಿ ಸಿಲುಕಿರುವ ವ್ಯಕ್ತಿಯ ಬದುಕಿನಲ್ಲಿ ಸಂಭವಿಸಬಹುದಾದ ಅನಾಹುತವನ್ನು ಮಾರ್ಮಿಕವಾಗಿ ವಚನದಲ್ಲಿ ಬಿಂಬಿಸಿದ್ದಾರೆ. ಎಡ್ ವ್ಹಿಲ್ ಅವರಂತೆ ‘ಇನ್ನೊಬ್ಬರ ಮೇಲಿನ ಕೋಪದಿಂದ ಯಾವುದೇ ಪ್ರಯೋಜನವಿಲ. ಅದು ಇನ್ನೊಬ್ಬನ ಮೇಲೆ ಪರಿಣಾಮ ಉಂಟುಮಾಡದು. ಅದು ನಿನ್ನನ್ನು ಅಶಕ್ತನನ್ನಾಗಿ ಮಾಡುವುದು ಅದರಿಂದ ನಿನಗೆ ನಷ್ಟ’. ಹಾಗಾಗಿ ನಾವು ಕೋಪದ ಕೂಪದಿಂದ ಹೊರಬರುವುದು ನಮ್ಮ ಬದುಕಿನ ಮೊದಲ ಆದ್ಯತೆಯಾಗಬೇಕಿದೆ. ಈ ದಿಸೆಯಲ್ಲಿ ಕೋಪ ನಿಗ್ರಹಿಸಲು ಗೌತಮ ಬುದ್ಧನ ಬದುಕಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮೆಲುಕು ಹಾಕುವುದು ತುಂಬ ಸಮಂಜಸವೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.