ADVERTISEMENT

ನೀರೆರಚಾಟದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
ನೀರೆರಚಾಟದ ಜಾತ್ರೆ
ನೀರೆರಚಾಟದ ಜಾತ್ರೆ   

-ಸುರೇಶ ಜಾಲಹಳ್ಳಿ

*

ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ  ರಾಯಚೂರು ಜಿಲ್ಲೆಯ ಜಾಲಹಳ್ಳಿಯ ಶ್ರೀರಂಗನಾಥ ದೇವಾಲಯಕ್ಕೆ ಜಾತ್ರೆಯ ಸಡಗರ. ದವನದ ಹುಣ್ಣಿಮೆಯಾದ ಇದೇ 15ರಂದು ಜಾತ್ರೆ ನಡೆಯಲಿದೆ.

ADVERTISEMENT

ಬೇರೆಲ್ಲೂ ಕಾಣಸಿಗದ ನೀರೆರಚಾಟ ಈ ಜಾತ್ರೆಯ ವಿಶೇಷ. ಒಬ್ಬರ ಮೇಲೊಬ್ಬರು ನೀರು ಎರಚುತ್ತಾ ಖುಷಿಪಡುತ್ತಾರೆ. ಬೇಸಿಗೆಯ 45–48 ಡಿಗ್ರಿ ಸೆಲ್ಸಿಯಸ್  ಬಿರುಬಿಸಿಲಿನಲ್ಲಿ ನೀರಾಟ  ಮೈಗೆ ತಂಪು, ಮನಸಿಗೆ ಮುದ ನೀಡುತ್ತದೆ. ಬರದ ನಡುವೆ ಇಂಥದ್ದೊಂದು ಸಂಪ್ರದಾಯ ನಿಲ್ಲುವುದಿಲ್ಲ.

ಜಾತ್ರೆ ಸಮಯದಲ್ಲಿ ಪ್ರತಿದಿನ ವಿಷ್ಣುವಿನ ದಶಾವತಾರಗಳ ಮೆರವಣಿಗೆ ನಡೆಯುತ್ತದೆ. ಒಂಬತ್ತನೆಯ ದಿನಕ್ಕೆ ರಾತ್ರಿಯಿಡೀ ಝಗಮಗಿಸುವ ಬೆಳಕಿನಲ್ಲಿ ಗರುಡವಾಹನನ ಸೇವೆ, ಮೆರವಣಿಗೆ ಗಮನ ಸೆಳೆಯುತ್ತದೆ. ಹುಣ್ಣಿಮೆಯದಿನ ಬೆಳದಿಂಗಳ ಚಂದಿರನ ಬೆಳಕಿನಲ್ಲಿ ರಥ ಮುಂದೆ ಮುಂದೆ ಸಾಗುತ್ತಿದ್ದರೆ ಸಹಸ್ರಾರು ಭಕ್ತಾದಿಗಳ ಜಯಘೋಷ, ಹರ್ಷೋದ್ಘಾರದ ನಡುವೆ ಬಾಳೆಹಣ್ಣು, ಉತ್ತತ್ತಿಗಳನ್ನು ರಥದ ಮೇಲೆ ಎಸೆಯುವ ಕಾರ್ಯಕ್ರಮ ನಡೆಯುತ್ತದೆ.

ಶ್ರೀರಂಗನಾಥಸ್ವಾಮಿ ಇಲ್ಲಿ ನೆಲೆಗೊಂಡಿರುವುದರ ಹಿಂದೆ ರೋಚಕ ಕಥೆ ಇದೆ. ಎಂಟನೆಯ ಶತಮಾನದ ಮಾತು. ಜಾಲಹಳ್ಳಿಯ ಉಪ್ಪು ಮಾರುವ ವ್ಯಾಪಾರಿಗಳು ಉಪ್ಪನ್ನು ಒಂದೂರಿಂದ ಮತ್ತೊಂದೂರಿಗೆ ಸಾಗುತ್ತಿದ್ದರು.

ಒಂದು ಸಲ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಗ್ರಾಮಕ್ಕೆ ಹೋಗಿ ವಾಪಸು ಮರಳುವಾಗ ಶ್ರೀರಂಗನಾಥದೇವರು ಉಪ್ಪಿನ ಮೂಟೆಯೊಡನೆ ಜಾಲಹಳ್ಳಿಗೆ ಬಂದ ಎಂಬ ನಂಬಿಕೆ ಇದೆ. ನಂಬಿಕೆ ಏನೇ ಇದ್ದರೂ ಜಾಲಹಳ್ಳಿಯಲ್ಲಿ ನೆಲೆಯಾದ ಶ್ರೀರಂಗನಾಥಗೆ ತಿರುಪತಿ ವೆಂಕಟರಮಣ ದೇವಾಲಯದ ವೈಷ್ಣವಶೈಲಿಯಲಿ ದೇವಾಲಯವನ್ನು ನಿರ್ಮಿಸಿರುವುದು ವಿಶೇಷ. ಈ ಸಂದರ್ಭದಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.