ADVERTISEMENT

ಅಮ್ಮಾ…ನಂಗೂ ಬೇಕು ಆ ಗೊಂಬೆ

ಕೆ.ಎಸ್‌.ರಾಜರಾಮ್‌
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ನಂದಿ ಗ್ರಾಮದ ಭೋಗಾ ನಂದೀಶ್ವರ ದೇವಾಲಯದಲ್ಲಿ ಅಮ್ಮ ಮಗಳು
ನಂದಿ ಗ್ರಾಮದ ಭೋಗಾ ನಂದೀಶ್ವರ ದೇವಾಲಯದಲ್ಲಿ ಅಮ್ಮ ಮಗಳು   

‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ...’ ಎಂದು ಕೈಬೀಸಿ ಕರೆಯುವ ದೇವಾಲಯಗಳು ನಮ್ಮ ನಾಡಿನ ಆಸ್ತಿಗಳು. ಬೆಂಗಳೂರಿನ ಆಸುಪಾಸು ದ್ರಾವಿಡ ಶೈಲಿಯ ಅನೇಕ ದೇಗುಲಗಳು ಕಂಡು ಬರುತ್ತವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗಾನಂದೀಶ್ವರ ದೇಗುಲ ಸಹ ಈ ಸಾಲಿಗೆ ಸೇರುತ್ತದೆ.

ಒಂಬತ್ತನೇ ಶತಮಾನದಲ್ಲಿ ಬಾಣರ ರಾಜಮನೆತನದ ರಾಣಿ ರತ್ನಾವತಿಯಿಂದ ಕಟ್ಟಲ್ಪಟ್ಟ ಈ ಶಿವ ಪಾರ್ವತಿ ಪೂಜಾಸ್ಥಳ, ಮುಂದಿನ ದಿನಗಳಲ್ಲಿ ವಿವಿಧ ರಾಜಮನೆಗಳಿಂದ ಅಭಿವೃದ್ಧಿ ಹೊಂದಿತು.

ಒಂದು ಸಂಜೆ, ಪುಟಾಣಿ ಪಾಪುವಿನೊಂದಿಗೆ ದೇಗುಲಕ್ಕೆ ಬಂದಿದ್ದ ಮಹಿಳೆಯ ಆತ್ಮೀಯ– ಆಕರ್ಷಕವಾದ ಈ ದೃಶ್ಯವನ್ನು ಮಂಟಪದ ಆಚಿನಿಂದ ಸಂಯೋಜಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದವರು ಹವ್ಯಾಸಿ ಛಾಯಾಗ್ರಾಹಕಿ ಮಾರುತಿ ಸೇವಾನಗರ ನಾಗಯ್ಯನಪಾಳ್ಯದ ಗೀತಾ ಸೀತಾರಾಮ್.

ADVERTISEMENT

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ ಉದ್ಯೋಗಿಯಾಗಿರುವ ಗೀತಾ, ಕಳೆದ ಮೂರು ವರ್ಷಗಳಿಂದ ವನ್ಯ ಪಕ್ಷಿ ಹಾಗೂ ಕ್ಯಾಂಡಿಡ್ ಛಾಯಾಗ್ರಹಣದ ಹವ್ಯಾಸ ಹೊಂದಿದ್ದಾರೆ. ಈ ಚಿತ್ರ ತೆಗೆಯಲು ಅವರು ಕ್ಯಾಮೆರಾ, ಕೆನಾನ್ 600ಡಿ, ಜೊತೆಗೆ 55– 250 ಎಂ.ಎಂ. ಜೂಂ ಲೆನ್ಸ್. 200 ಎಂ.ಎಂ ಫೋಕಲ್ ಲೆಂಗ್ತ್‌ನಲ್ಲಿ ಅಪರ್ಚರ್ ಎಫ್ 5.6, ಷಟರ್ ವೇಗ 1/250 ಸೆಕೆಂಡ್, ಐ.ಎಸ್.ಒ 640, ಟ್ರೈಪಾಡ್ ಮತ್ತು ಫ್ಲಾಷ್ ಬಳಸಿಲ್ಲ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನ ಇಂತಿದೆ...

* ಕ್ಯಾಮೆರಾ ಹಿಡಿತಗಳ ಅಳವಡಿಕೆ, ಮುಖ್ಯವಾಗಿ ಡಿಫೆರೆಂಶಿಯಲ್ ಫೋಕಸಿಂಗ್ ತಂತ್ರ ಉದ್ದೇಶಪೂರ್ವಕವಾಗಿ ಚಿತ್ರದಲ್ಲಿ ಮೂಡಿರುವ ಭಿನ್ನ ಸಂಗಮವಲಯದ ಆಯಾಮಕ್ಕೆ ಪೂರಕವಾಗಿದೆ.
* ಮಹಿಳೆ ಮತ್ತು ಮಗುವಿನ ಮೇಲೆ ಹೆಚ್ಚಿನ ಬೆಳಕು ಬಿದ್ದಿದೆ. ಹೀಗಾಗಿಯೇ ಇಬ್ಬರೂ ಸ್ಫುಟವಾಗಿ ಕಾಣಿಸುತ್ತಿದ್ದಾರೆ. ಮುನ್ನೆಲೆಯಲ್ಲಿರುವ ಮಂಟಪದ ಕೆತ್ತನೆ ಸ್ಥಂಭಗಳು ಮಂದ ಬೆಳಕಿನ ನೆರಳಿನಲ್ಲಿವೆ.
* ಅಪರ್ಚರ್ ಒಂದು ವೇಳೆ ಕಿರಿದಾಗಿದ್ದಾರೆ (F 11 ಅಥವಾ 16) ಸ್ಥಂಭಗಳೆಲ್ಲವೂ ಸ್ಫುಟವಾಗಿ ಮೂಡಿ, ಚಿತ್ರದಲ್ಲಿ ಯಾವ ಭಾಗಕ್ಕೆ ಮುಖ್ಯ ಪ್ರವೇಶ ಬಿಂದು ಎಂಬುದು ಗೊಂದಲವಾಗುತ್ತಿತ್ತು. ಛಾಯಾಗ್ರಾಹಕರು F 6 ಬಳಸುವ ಮೂಲಕ ಪ್ರವೇಶ ಬಿಂದುವನ್ನು ಸ್ಫುಟವಾಗಿ ಕಾಣಿಸಿಕೊಟ್ಟಿದ್ದಾರೆ.
* ಚಿತ್ರ ನೋಡಿದ ತಕ್ಷಣ ಮಗುವಿನ ಕಾತರದ ಕಣ್ಣು-ಚಾಚಿದ ಕೈಗಳನ್ನು ತಾಕುತ್ತವೆ. ಅಲ್ಲಿಂದ ಮಹಿಳೆಯೆಡೆಗೆ, ನಂತರ ಒಂದೊಂದಾಗಿ ಸ್ಥಂಭಗಳ ನಿಲುವು, ಕೆತ್ತನೆಯ ಸವಿಯುಣ್ಣುತ್ತಾ ಚಿತ್ರದೆಲ್ಲೆಡೆ ಸಾಗುವುದು ಸಾದ್ಯವಾಗಿದೆ. ಇದಕ್ಕೆ ಎಕ್ಸ್‌ಪೋಷರ್‌ನ ಇತರ ಅಂಶಗಳೂ ಸಹಕರಿಸಿವೆ.
* ಕಲಾತ್ಮಕವಾಗಿ ಮಧುರವಾದ ಭಾವನೆಗಳನ್ನು ಸೂಸುವ ಚಿತ್ರ ಇದು.
* ಪ್ರವಾಸಿಗರಿಗೆ ತೊಂದರೆ ಕೊಡದೆ, ದೂರದಿಂದ ಉತ್ತಮ ಜೂಂ ಲೆನ್ಸ್ ಅಳವಡಿಸಿದ ಕ್ಯಾಮೆರಾವನ್ನು ಬಳಸಿ ಅಂತಹವರ ಭಾವ- ಭಂಗಿಗಳನ್ನು ದೇವಸ್ಥಾನದ ಹಿನ್ನೆಲೆ, ಮುನ್ನೆಲೆಗಳ ಜೊತೆಗೆ ಸಂಯೋಜಿಸಿ ಚಿತ್ರ ತೆಗೆಯಬೇಕಾಗುತ್ತದೆ. ಇದು ಸಾಧ್ಯವಾಗಲು ಉತ್ತಮ ಗುಣಮಟ್ಟದ ಕ್ಯಾಮೆರಾ ಜೊತೆಗೆ ಸಾಕಷ್ಟು ಪೂರ್ವ ತಯಾರಿ ಅಗತ್ಯ. ಈ ಚಿತ್ರವು ಛಾಯಾಗ್ರಾಹಕರ ಪೂರ್ವ ಸಿದ್ಧತೆಯನ್ನು ಸಾರಿ ಹೇಳುತ್ತದೆ.
* ದೇಗುಲಗಳ ಕೆತ್ತನೆಗಳು ಮುಖ್ಯವಾಗಿದ್ದರೆ, ಅವನ್ನು ಮಂದವಾಗಿಸುವ (ಔಟ್ ಆಫ್ ಫೋಕಸ್ ತಂತ್ರ) ಈ ಮಾದರಿ ಸಹಕಾರಿಯಲ್ಲ. ದೊಡ್ಡಳತೆಯ ಜೂಂ ಲೆನ್ಸ್ ಬದಲು ನಾರ್ಮಲ್ ಲೆನ್ಸ್ ಅಥವಾ ವೈಡ್ ಆ್ಯಂಗಲ್‌ ಲೆನ್ಸ್ ಬಳಸಿ ನಿರೂಪಣೆಯ ದೃಶ್ಯಗಳೆಲ್ಲವೂ ಸ್ಫುಟವಾಗಿ ಕಾಣಿಸುವಂತೆ ಕಿರಿದಾದ ಅಪರ್ಚರ್ ಬಳಸಬಹುದು. ಆಗ ಶಿಲ್ಪವೈಭವದ ಜೊತೆಗೆ ಅಲ್ಲಲ್ಲಿ ಸುತ್ತುವ ಪ್ರವಾಸಿಗರೂ ಚೌಕಟ್ಟಿನಲ್ಲಿ ಮೂಡಿಬರುತ್ತಾರೆ.
***
ಛಾಯಾಚಿತ್ರಗಾರ್ತಿ :  ಗೀತಾ ಸೀತಾರಾಮ್
Email: geetha2015seetharam@gmail.com
Phone: 9880080261
***
ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು.  ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್ : metropv@prajavani.co.in, ದೂರವಾಣಿ- 25880636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.