ADVERTISEMENT

‘ಉಪ್ಪು ಹುಳಿ ಖಾರ’ದ ಟೀಸರ್‌ ಸೊಗಸು...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
‘ಉಪ್ಪು ಹುಳಿ ಖಾರ’ದ ಟೀಸರ್‌ ಸೊಗಸು...
‘ಉಪ್ಪು ಹುಳಿ ಖಾರ’ದ ಟೀಸರ್‌ ಸೊಗಸು...   

ಅದು ‘ಉಪ್ಪು ಹುಳಿ ಖಾರ’ ಸಿನಿಮಾ ತಂಡದ ಪತ್ರಿಕಾಗೋಷ್ಠಿ. ‘ಒಳಗೆ ಸೇರಿದರೆ ಗುಂಡು...’ ಹಾಡಿಗೆ ಹೆಜ್ಜೆ ಹಾಕಿ, ಮದ್ಯಕ್ಕೆ ಮರ್ಯಾದೆ ತಂದುಕೊಟ್ಟಿದ್ದ ಮಾಲಾಶ್ರೀ ವೇದಿಕೆಯಲ್ಲಿದ್ದರು. ಅವರ ಜೊತೆ ಹಿರಿಯ ನಟ ಅಂಬರೀಷ್ ಕೂಡ ಇದ್ದರು. ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರದ ಮೊದಲ ಪತ್ರಿಕಾಗೋಷ್ಠಿ ಅದು.

ಪತ್ರಿಕಾಗೋಷ್ಠಿಯನ್ನು ಕರೆದಿದ್ದು ನಿರ್ದೇಶಕ ಇಮ್ರಾನ್ ಸರ್ದಾರಿಯಾ. ‘ಉಪ್ಪು ಹುಳಿ ಖಾರ’ ಸಿನಿತಂಡ ಸಿದ್ಧಪಡಿಸಿದ ಒಟ್ಟು ಮೂರು ಟೀಸರ್‌ಗಳನ್ನು ಅಂಬರೀಷ್ ಬಿಡುಗಡೆ ಮಾಡಿದರು.

ತಮ್ಮ ಪಾತ್ರವನ್ನು ಪರಿಚಯಿಸುವ ಟೀಸರ್ ಬಿಡುಗಡೆ ನಂತರ ಮಾತನಾಡಿದ ಮಾಲಾಶ್ರೀ, ‘ನನ್ನದು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ. ಈ ಸಿನಿಮಾದಲ್ಲಿ ನಾನು ಅಭಿನಯಿಸುವಂತೆ ಮಾಡಿದ್ದು ಇಮ್ರಾನ್. ನನಗೆ ಪ್ರತಿ ಸಿನಿಮಾ ಕೂಡ ನನ್ನ ಉಸಿರಿನಂತೆಯೇ ಆಗಿಬಿಡುತ್ತದೆ’ ಎಂದರು.

ADVERTISEMENT

ಅಂದಹಾಗೆ, ಈ ಸಿನಿಮಾಕ್ಕಾಗಿ ಮಾಲಾಶ್ರೀ ಅವರು ಒಂಬತ್ತು ಕೆ.ಜಿ. ತೂಕ ಇಳಿಸಿಕೊಂಡಿದ್ದಾರಂತೆ! ಈ ಸಿನಿಮಾ ಮಾಸ್‌ ಪ್ರೇಕ್ಷಕರಿಗಾಗಿ ಎಂದು ತಂಡ ಹೇಳಿಕೊಂಡಿದೆ. ಟಿ.ವಿ. ಕಾರ್ಯಕ್ರಮಗಳ ನಿರೂಪಣೆ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಅನುಶ್ರೀ ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಅವರ ಪಾತ್ರವನ್ನೂ ಟೀಸರ್‌ ಮೂಲಕ ತೋರಿಸಲಾಯಿತು. ಅನುಶ್ರೀ ಅವರ ಜೋಡಿಯಾಗಿ ಶರತ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ಶರತ್ ಅವರು ಸಾಕಷ್ಟು ವ್ಯಾಯಾಮ, ನಟನೆಯ ತಯಾರಿ ಮಾಡಿಕೊಂಡಿದ್ದರಂತೆ. ಚಿತ್ರದ ಕೆಲವು ಭಾಗಗಳನ್ನು ಇನ್ಫೊಸಿಸ್‌ ಆವರಣದಲ್ಲಿ ಚಿತ್ರೀಕರಿಸಲಾಗಿದೆ.

‘ಈ ಸಿನಿಮಾದಲ್ಲಿ ಮಾಲಾಶ್ರೀ ಅವರನ್ನು ರಾಕಿಂಗ್‌ ಪಾತ್ರದಲ್ಲಿ ಕಾಣುವಿರಿ’ ಎಂಬ ಭರವಸೆ ನೀಡಿದರು ಇಮ್ರಾನ್‌. ಸಿನಿಮಾ ಇದೇ 24ರಂದು ಬಿಡುಗಡೆ ಆಗುತ್ತಿದೆ. ‘ಟೀಸರ್‌ ವೀಕ್ಷಿಸಿದ ನಂತರ ನೀರು ಕುಡಿಯಬೇಕು ಅನಿಸುತ್ತದೆ. ಅಷ್ಟು ಚೆನ್ನಾಗಿದೆ ಟೀಸರ್‌’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಅಂಬಿ.

ಮಹೇಶ್ ರೆಡ್ಡಿ ಅವರು ಇದರ ನಿರ್ಮಾಪಕರು, ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.