‘ಚಿತ್ರ ನಿರ್ದೇಶನ ಮಾಡಬೇಕೆಂಬುದು ಹಲವು ದಿನದ ಕನಸಾಗಿತ್ತು. ಈ ಹಸಿವು ಈಗ ಈಡೇರಿದೆ’ ಎಂದು ಮಾತಿಗಿಳಿದರು ನಟ ಯತಿರಾಜ್.
ಸಿನಿಮಾ ಪತ್ರಕರ್ತ, ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು ಮೊದಲ ಬಾರಿಗೆ ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಸಹಜವಾಗಿ ಅವರ ಮೊಗದಲ್ಲಿ ಒತ್ತಡ ಎದ್ದುಕಾಣುತ್ತಿತ್ತು. ತಾವೇ ನಾಯಕನಾಗಿರುವ ‘ಪೂರ್ಣ ಸತ್ಯ’ ಚಿತ್ರದ ಎರಡು ಹಾಡುಗಳ ಬಿಡುಗಡೆ ವೇಳೆ ಚಿತ್ರೀಕರಣದ ಅನುಭವ ಹಂಚಿಕೊಂಡರು.
‘ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ನಿರ್ದೇಶನ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದೇನೆ. ಹಾಗಾಗಿ, ಆತಂಕ ಸಹಜ. ಆನಂದ್ ಆಡಿಯೊ ಸಂಸ್ಥೆಯು ಹಾಡುಗಳನ್ನು ಹೊರತಂದಿದೆ’ ಎಂದರು ಯತಿರಾಜ್.
ಈ ಚಿತ್ರಕ್ಕೆ ಪೂರ್ಣ ಕಥೆ ಕೊಟ್ಟಿದ್ದು ಅವರ ಮಗ ಅಂತೆ. ಮರಳುಗಾಡು ಕುರಿತು ಅವರ ಮಗ ಒಂದು ಕಥೆ ಬರೆದಿದ್ದನಂತೆ. ಅದನ್ನೇ ಬದಲಾಯಿಸಿಕೊಂಡು ‘ಪೂರ್ಣ ಸತ್ಯ’ ಕಥೆ ಬರೆಯಲಾಗಿದೆಯಂತೆ. ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
‘ಚಿತ್ರಕ್ಕೆ ನಾಯಕಿಯರ ಹುಡುಕಾಟ ನಡೆಸಿದೆ. ನಿಮ್ಮ ಸಿನಿಮಾದಲ್ಲಿ ನಟಿಸುತ್ತೇವೆ ಎಂದಿದ್ದ ಹಲವು ನಟಿಯರು ಬಳಿಕ ಫೋನ್ ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ಮೊಬೈಲ್ ಸಂದೇಶಕ್ಕೂ ಸ್ಪಂದಿಸುತ್ತಿರಲಿಲ್ಲ. ಕೊನೆಗೆ, ಗೌತಮಿ ಗೌಡ ನನ್ನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡು, ನನ್ನಲ್ಲಿದ್ದ ಸಂಕೋಚವನ್ನು ಹೋಗಲಾಡಿಸಿದ್ದಾರೆ’ ಎಂದರು ಯತಿರಾಜ್.
ನಾಯಕಿ ಗೌತಮಿ ಗೌಡ, ‘ಇದೊಂದು ಕೌಟುಂಬಿಕ ಚಿತ್ರ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜನರು ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಬೇಕು’ ಎಂದಷ್ಟೇ ಹೇಳಿದರು.
ಎಂ.ಡಿ. ಕೌಶಿಕ್ ತಾರಾಗಣದಲ್ಲಿದ್ದಾರೆ. ಮಾರುತಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಬಿ.ಎಲ್. ಬಾಬು ಅವರ ಛಾಯಾಗ್ರಹಣವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.