ದಕ್ಕಿರುವ ಸುಖವನ್ನು ಬಿಟ್ಟು, ಇಲ್ಲದಿರುವುದರ ಕಡೆ ಸಾಗುವ ಕಥೆಯನ್ನು ಹೊಂದಿರುವ ಸಿನಿಮಾವೊಂದು ‘ಚಂದನವನ’ದಲ್ಲಿ ಸೆಟ್ಟೇರಲಿದೆ. ಈ ಸಿನಿಮಾದ ಹೆಸರು ‘ಪೂರ್ಣಸತ್ಯ’. ಇದರ ನಿರ್ದೇಶನ ಹಾಗೂ ನಿರ್ಮಾಣ ಯತಿರಾಜ್ ಅವರದ್ದು.
ತಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡಲು ಯತಿರಾಜ್ ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ಚಿತ್ರತಂಡ ಕೂಡ ಇತ್ತು. ‘ಈ ತಿಂಗಳ 18ರಿಂದ ಚಿತ್ರೀಕರಣ ಶುರುವಾಗಲಿದೆ. ನಾನು ಹೇಳುವುದು ಮಾತ್ರ ಸರಿ ಎಂಬ ಮನೋಭಾವ ಸಮಾಜದಲ್ಲಿ ಬೆಳೆಯುತ್ತಿರುವುದರ ಬಗ್ಗೆಯೂ ಈ ಸಿನಿಮಾದಲ್ಲಿ ಉಲ್ಲೇಖ ಇರಲಿದೆ’ ಎಂದರು ಯತಿರಾಜ್.
ಈ ಸಿನಿಮಾದಲ್ಲಿ ಯತಿರಾಜ್ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನನ್ನದು ಸರಳವಾದ, ಎಲ್ಲರನ್ನೂ ಪ್ರತಿನಿಧಿಸುವ ಪಾತ್ರ’ ಎಂದು ಅವರು ಹೇಳಿಕೊಂಡಿದ್ದಾರೆ. ಗೌತಮಿ ಗೌಡ ಅವರು ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿರಿಯ ನಟ ಎಂ.ಡಿ. ಕೌಶಿಕ್ ಅವರೂ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ನನ್ನದು ಈ ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ಇರುವ ಪಾತ್ರ. ಕಥೆಯ ಕಾರಣಕ್ಕೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದರು ಗೌತಮಿ. ಈ ಸಿನಿಮಾದ ಗ್ಲಾಮರ್ ಪಾತ್ರವೊಂದಕ್ಕೆ ಸ್ವಪ್ನಾ ಅವರು ಬಣ್ಣ ಹಚ್ಚಿದ್ದಾರೆ. ಸ್ವಪ್ನಾ ಶಿವಮೊಗ್ಗದವರು. ರಂಗಭೂಮಿಯ ಮೂಲಕ ಚಿತ್ರರಂಗ ಪ್ರವೇಶಿಸಿರುವ ಡಿಂಗ್ರಿ ನರೇಶ್ ಹಾಗೂ ಮಂಜು ಚಿನಕುರುಳಿ ಅವರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ಬದುಕಿಗೆ ಬಹಳ ಹತ್ತಿರವಾಗಿರುವ ಸಿನಿಮಾ ಇದು’ ಎಂದರು ಕೌಶಿಕ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.