ADVERTISEMENT

ಮನಸೇ, ಓ ಮುದ್ದು ಮನಸೇ...

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 19:30 IST
Last Updated 1 ಅಕ್ಟೋಬರ್ 2014, 19:30 IST

ಸಂತೋಷ್, ರಮೇಶ್ ಹಾಗೂ ಜೀವನ್ ಎಂಬ ಮಿತ್ರರು ಒಟ್ಟಾಗಿ ನಿರ್ಮಿಸಿದ ಚಿತ್ರ ‘ಮುದ್ದು ಮನಸೇ’. ಈ ಚಿತ್ರ ಶೂಟಿಂಗ್, ಡಬ್ಬಿಂಗ್ ಎಲ್ಲ ಮುಗಿಸಿ ಸದ್ಯ ರೀ ರೆಕಾರ್ಡಿಂಗ್ ಹಂತದಲ್ಲಿದೆ. ಮಧ್ಯೆ ಬಿಡುವು ಮಾಡಿಕೊಂಡು ಮಾಧ್ಯಮದ ಎದುರು ಚಿತ್ರತಂಡ ಹಾಜರಾಗಿತ್ತು. ಸದ್ಯದಲ್ಲೇ ನಡೆಯಲಿರುವ ಹಾಡುಗಳ ಬಿಡುಗಡೆ ಕುರಿತು ಮಾಹಿತಿ ನೀಡುವ ಪತ್ರಿಕಾಗೋಷ್ಠಿ ಅದಾಗಿತ್ತು.

ಅದ್ದೂರಿ ಆಡಿಯೊ ರಿಲೀಸ್‌ ಸಮಾರಂಭಕ್ಕೆ ಅಕ್ಟೋಬರ್ 13ರಂದು ಮುಹೂರ್ತ ಫಿಕ್ಸ್ ಆಗಿದೆ. ಸ್ಥಳ ಇನ್ನೂ ಫಿಕ್ಸ್ ಆಗಿಲ್ಲ. ಸದ್ಯದಲ್ಲೇ ಆ ಕುರಿತು ಮಾಹಿತಿ ನೀಡುವುದಾಗಿ ತಂಡ ಹೇಳಿದೆ. ಆದರೆ ಸಮಾರಂಭದ ಕುರಿತಾಗಿ ಪ್ರೇಕ್ಷಕರ ತಲೆಯಲ್ಲಿ ಹುಳು ಬಿಡುವ ಕೆಲಸವನ್ನು ತಂಡ ಯಶಸ್ವಿಯಾಗಿ ಮಾಡಿದೆ. ‘ಧ್ವನಿಸುರುಳಿ ಲೋಕಾರ್ಪಣೆ ಸಮಾರಂಭಕ್ಕೆ ‘ಬಾಸ್’ ಬರಲಿದ್ದಾರೆ. ಅವರೇ ಸೀಡಿ ಬಿಡುಗಡೆ ಮಾಡಲಿದ್ದಾರೆ’ ಎಂದ ತಂಡ, ಈ ‘ಬಾಸ್’ ಎಂದರೆ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸಮಾರಂಭದವರೆಗೂ ಇದು ಗೌಪ್ಯವಾಗಿರಲಿ ಎಂಬುದು ಅವರ ಯೋಜನೆ.

ಡಬ್ಬಿಂಗ್‌ಗೆ ಸುಮಾರು ಎರಡೂವರೆ ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ ನಿರ್ದೇಶಕ ಅನಂತ ಶೈನಿ. ‘ನಾಯಕ ಅರುಣ್ ಗೌಡ ಅವರ ಧ್ವನಿಯ ಡಬ್ಬಿಂಗ್ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಧ್ವನಿ ಬೇರೆ ರೀತಿಯೇ ಇರುತ್ತದೆ’ ಎನ್ನುತ್ತಾರೆ ಶೈನಿ. ‘ಆರು ಮಂದಿ ಚಿತ್ರ ನಿರ್ದೇಶಕರು ನಮ್ಮ ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ’ ಎಂದರು ನಿರ್ಮಾಪಕ ಸಂತೋಷ್.

ಮೊದಲ ಚಿತ್ರಕ್ಕಾಗಿ ಶುಭಾಶಯ ಪಡೆವ ನೆಪದಲ್ಲಿ ನಟ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಸಂತಸದಲ್ಲಿದ್ದರು ಅರುಣ್. ನಾಯಕನ ಜೀವನದ ಎರಡು ಮೂರು ವರ್ಷಗಳ ಅಂತರದಲ್ಲಿ ನಡೆವ ಕಥೆ ಇದು. ಹೀಗಾಗಿ ಅರುಣ್ ಎರಡು ಭಿನ್ನ ಛಾಯೆಯಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಅರುಣ್‌ಗೆ ಜೊತೆಯಾಗಿ ನಿತ್ಯಾ ರಾಮ್, ಐಶ್ವರ್ಯ ನಾಗ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಹಾಡುಗಳೆಲ್ಲ ತುಂಬ ಕಲರ್‌ಫುಲ್ ಆಗಿ ಬಂದಿವೆ’ ಎನ್ನುತ್ತಾರೆ ಐಶ್ವರ್ಯ. ವಿನೀತ್ ರಾಜ್ ಸಂಗೀತ ಹೊಸೆದಿದ್ದಾರೆ. ಒಟ್ಟಾರೆ ಮುದ್ದಾದ ಮನಸುಗಳ ಸುತ್ತ ನಡೆವ ಕಥೆ ‘ಮುದ್ದು ಮನಸೇ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.