ಬಾಲಿವುಡ್ನಲ್ಲಿ ಲೈಂಗಿಕ ಶೋಷಣೆಗೊಳಗಾದವರು ಧೈರ್ಯವಾಗಿ ಅದರ ಬಗ್ಗೆ ಮಾತನಾಡಬೇಕು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಒತ್ತಾಯಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಬಾಲಿವುಡ್ನಲ್ಲಿ ಬಹುತೇಕ ಜನರು ಮೌನ ತಾಳುತ್ತಾರೆ. ಕಾರಣ, ಸಂತ್ರಸ್ತರು ಮಾತನಾಡದಿದ್ದಲ್ಲಿ ಇವು ಕೇವಲ ಗಾಳಿಸುದ್ದಿಯಾಗುವ ಸಾಧ್ಯತೆಗಳೇ ಹೆಚ್ಚು. ಸಂತ್ರಸ್ತರಿಗೆ ಈ ಬಗ್ಗೆ ಮಾತನಾಡಿದರೆ ಯಾವ ವ್ಯತ್ಯಾಸವೂ ಆಗದು ಎಂಬ ಭ್ರಮೆ ಇದೆ. ಅವರಾದರೂ ಮಾತನಾಡಿದ್ದಲ್ಲಿ ಉಳಿದವರು ಖಂಡಿತವಾಗಿಯೂ ಬೆಂಬಲಿಸುತ್ತಾರೆ. ಜನಸಾಮಾನ್ಯರೂ ಶೋಷಿತರ ಪರವಾಗಿಯೇ ಇರುತ್ತಾರೆ. ಆದರೆ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರಕ್ಕೆ ಒಳಗಾದವರೇ ಮೌನವನ್ನು ಆಯ್ಕೆ ಮಾಡಿಕೊಂಡರೆ ಏನು ಮಾಡಬಹುದು? ಎಂಬುದು ಕಶ್ಯಪ್ ಪ್ರಶ್ನೆಯಾಗಿದೆ.
ಕಳೆದ ವರ್ಷ #ಮೀಟೂ ಚಳವಳಿಯ ರೂಪ ಪಡೆದದ್ದು, ಸಂತ್ರಸ್ತೆ ಧೈರ್ಯವಾಗಿ ಹೇಳಿಕೊಂಡಿದ್ದರಿಂದ. ಬಾಲಿವುಡ್ನಲ್ಲಿ ಯಾರನ್ನೂ ಹೆಸರಿಸಲಿಲ್ಲ. ಹೆಸರು ಹೇಳಲಿಚ್ಛಿಸದೆ ಇದ್ದರೆ ಚಳವಳಿಯ ರೂಪ ತಾಳಲು ಸಾಧ್ಯವೇ? ಅದು ಕೇವಲ ಗೊಣಗಾಟವಾಗಿಯೇ ಕೊನೆಗೊಳ್ಳುತ್ತದೆ.
ಲೈಂಗಿಕ ಕಿರುಕುಳ ಅನುಭವಿಸುವುದು ಏನಂತ ನನಗೆ ತಿಳಿದಿದೆ. ನಾನೂ ಈ ದೌರ್ಜನ್ಯಕ್ಕೆ ಒಳಗಾದವನು. ಈ ಬಗ್ಗೆ ಮಾತನಾಡಬೇಕಾದಾಗ ಧ್ವನಿ ಎತ್ತಿದ್ದೇನೆ. ಈ ಹಿಂದೆ ಅಮೀರ್ಖಾನ್ ಶೋನಲ್ಲಿ ಈ ಬಗ್ಗೆ ಮಾತಾಡಿದ್ದೇನೆ. ಶೋಷಣೆಯ ಬಗ್ಗೆ ಮಾತನಾಡುವುದು, ಹೆಸರುಗಳನ್ನು ಬಹಿರಂಗ ಪಡಿಸುವುದು ಅವರವರ ವೈಯಕ್ತಿಕ ಹಕ್ಕಾಗಿದೆ.
ಇಷ್ಟಕ್ಕೂ ಲೈಂಗಿಕ ದೌರ್ಜನ್ಯ ಎಲ್ಲ ಕ್ಷೇತ್ರಗಳಲ್ಲೂ ಇದೆ. ಆದರೆ ಬಾಲಿವುಡ್ ಅನ್ನೇ ಗುರಿ ಮಾಡುತ್ತಿರುವುದೇಕೆ? ಇದೂ ಅನುರಾಗ್ ಪ್ರಶ್ನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.