ಶ್ರೀನಗರ: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಆಫ್ಸನ್ ಆಶಿಕ್, ಇದೀಗ ಕಣಿವೆ ರಾಜ್ಯದ ಮಹಿಳಾ ಫುಟ್ಬಾಲ್ ತಂಡದ ನಾಯಕಿಯಾಗಿ ದೇಶಕ್ಕೆ ಹೆಮ್ಮೆ ತರುವ ಕನಸು ಕಾಣುತ್ತಿದ್ದಾಳೆ.
ಆಫ್ಸನ್ ಆಶಿಕ್ ಮಹಿಳಾ ಫುಟ್ಬಾಲ್ ತಂಡದ ಸದಸ್ಯರೊಂದಿಗೆ ಮಂಗಳವಾರ ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ 30 ನಿಮಿಷ ಮಾತುಕತೆ ನಡೆಸಿದ್ದರು.
‘ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಗೃಹಸಚಿವರು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು’ ಎಂದು ಆಶಿಕ್ ಹೇಳಿದ್ದಾರೆ.
21 ವರ್ಷದ ಆಫ್ಸನ್ ಆಶಿಕ್ ಕಣಿವೆ ರಾಜ್ಯದ ಮಹಿಳಾ ಫುಟ್ಬಾಲ್ ತಂಡದ ನಾಯಕಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಆಶಿಕ್, ‘ಹಿಂದೆ ನಡೆದ ಘಟನೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದಿಲ್ಲ. ಸದ್ಯ ನನ್ನ ಬದುಕು ಬದಲಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತರಲು ಬಯಸುತ್ತೇನೆ’ ಎಂದರು.
‘ರಾಜ್ಯದಲ್ಲಿ ಕ್ರೀಡೆಗೆ ಪ್ರೋತ್ಸಾಹ ದೊರೆತರೆ, ಯುವ ಜನತೆ ಭಯೋತ್ಪಾದನೆ ಹಾಗೂ ಇನ್ನಿತರೆ ಕಾನೂನುಬಾಹಿರ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ ಎಂದು ತಂಡದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರಧಾನಮಂತ್ರಿ ವಿಶೇಷ ಅನುದಾನದಡಿಯಲ್ಲಿ ₹100 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.