ADVERTISEMENT

ಅಡ್ವಾಣಿ, ಜೋಷಿಗೆ ‘ಸುಪ್ರೀಂ’ ನೋಟಿಸ್

ಬಾಬ್ರಿ ಮಸೀದಿ ನೆಲಸಮ ಪ್ರಕರಣದ ಅಪರಾಧ ಸಂಚು ಆಪಾದನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಬಾಬ್ರಿ ಮಸೀದಿ ನೆಲಸಮ ಪ್ರಕರಣದ ಅಪರಾಧ ಸಂಚು ಆಪಾದನೆಯಿಂದ ಮುಕ್ತಿ ಹೊಂದಿರುವ ಬಿಜೆಪಿಯ ಹಿರಿಯ ಮುಖಂಡರಾದ ಎಲ್‌. ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ  ಹಾಗೂ ಇತರರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.

ಬಾಬ್ರಿ ಮಸೀದಿ ಪ್ರಕರಣದ ಅರ್ಜಿದಾರರಾದ ಹಾಜಿ ಮಹಬೂಬ್ ಅಹಮದ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ಎಚ್. ಎಲ್. ದತ್ತು ನೇತೃತ್ವದ ನ್ಯಾಯಪೀಠವು ಬಿಜೆಪಿ ಮುಖಂಡರು ಹಾಗೂ ಸಿಬಿಐಗೆ ಪ್ರತ್ಯೇಕ ನೋಟಿಸ್ ನೀಡಿದೆ.
ಕೇಂದ್ರದಲ್ಲಿ ಸರ್ಕಾರ ಬದಲಾಗಿರುವುದರಿಂದ  ಸಿಬಿಐನಿಂದಲೂ  ಪ್ರತಿಕ್ರಿಯೆ ಪಡೆಯಬೇಕು ಎಂದು  ಅರ್ಜಿದಾರರು ಮನವಿ ಮಾಡಿದ್ದಾರೆ.

ಅಡ್ವಾಣಿ ಮತ್ತು ಇತರ 19 ಜನರ ವಿರುದ್ಧದ ಅಪರಾಧ ಸಂಚು ಆಪಾದನೆಯನ್ನು ಕೈಬಿಟ್ಟ ಅಲಹಾಬಾದ್ ಹೈಕೋರ್ಟ್‌ ಕ್ರಮವನ್ನು 

ಕೇಂದ್ರದಲ್ಲಿ ಸರ್ಕಾರ ಬದಲಾಗಿರುವುದರಿಂದ ಸಿಬಿಐ ತನ್ನ ಮೊದಲಿನ ನಿಲುವಿಗೆ ಬದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
-ಹಾಜಿ ಮಹಬೂಬ್ ಅಹಮದ್,
ಅರ್ಜಿದಾರ

ಪ್ರಶ್ನಿಸಿ ಸಿಬಿಐ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ  ಮೇಲ್ಮನವಿ ಸಲ್ಲಿಸಿದೆ.

ಮೇಲ್ಮನವಿ ಸಲ್ಲಿಸಲು  ವಿಳಂಬವಾಗಿರುವ ಕಾರಣ ಪ್ರಮಾಣ ಪತ್ರ ಸಲ್ಲಿಸಲು ಸಿಬಿಐ ಕಾಲಾವಕಾಶ ಕೋರಿದ್ದರಿಂದ ನ್ಯಾಯಪೀಠವು ನಾಲ್ಕು ವಾರಗಳ ಅವಕಾಶ ನೀಡಿದೆ.

ಇದಕ್ಕೂ ಮೊದಲು ನ್ಯಾಯಪೀಠವು ಸಿಬಿಐ ವಿಳಂಬ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಸೆಷನ್‌್ಸ ನ್ಯಾಯಾಲಯ, ಅಡ್ವಾಣಿ ಮತ್ತು ಇತರ 19 ಜನರ ವಿರುದ್ಧ ಮಾಡಲಾಗಿದ್ದ ಅಪರಾಧ ಸಂಚು ಆರೋಪವನ್ನು ರದ್ದುಪಡಿಸಿತ್ತು. ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ ಎತ್ತಿಹಿಡಿದಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ 2010ರ ಮೇ 21ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT