ಚಂಡೀಗಢ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ತಪ್ಪಿತಸ್ಥರು ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ (ಆಗಸ್ಟ್ 28) ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
ತೀರ್ಪು ಪ್ರಕಟವಾದ ಬೆನ್ನಲ್ಲೇ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪಂಚಕುಲಾದ ಚಾಂದಿ ಮಂದಿರ್ ಸೇನಾ ಠಾಣೆಗೆ ಕರೆದೊಯ್ಯಲಾಗಿದೆ. ಅವರನ್ನು ಹರಿಯಾಣದ ಅಂಬಾಲ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ತೀರ್ಪು ಪ್ರಕಟವಾದ ತಕ್ಷಣ ತುರ್ತು ಕಾರ್ಯಪಡೆಯ ಸಿಬ್ಬಂದಿ ಸಿಬಿಐ ನ್ಯಾಯಾಲಯದ ಸುತ್ತ ಪಥಸಂಚಲನ ನಡೆಸಿ ಅಶ್ರುವಾಯು ಪ್ರಯೋಗ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಡೇರಾ ಸಚಾ ಸೌದ ಸಂಸ್ಥೆಯ ಸಿರ್ಸಾದಲ್ಲಿರುವ ಪ್ರಧಾನ ಕಚೇರಿಯನ್ನು ಭದ್ರತಾಪಡೆಗಳು ಸಂಪೂರ್ಣವಾಗಿ ಸುತ್ತುವರಿದಿವೆ. ತೀರ್ಪಿನಿಂದಾಗಿ ಹರಿಯಾಣದಾದ್ಯಂತ ಬಂದ್ನ ವಾತಾವರಣ ಸೃಷ್ಟಿಯಾಗಿದೆ ಎನ್ನಲಾಗಿದೆ.
ಈ ಮಧ್ಯೆ, ಶಾಂತಿ ಕಾಪಾಡುವಂತೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಡೇರಾ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳನ್ನು ಸನ್ನದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.