ನವದೆಹಲಿ: ದೆಹಲಿಯ ಪೂರ್ವಭಾಗವನ್ನು ಬಳಸಿ ಸಾಗುವ ‘ಈಸ್ಟರ್ನ್ ಪೆರಿಫರಲ್ ಎಕ್ಸ್ಪ್ರೆಸ್ ವೇ’ಯನ್ನು (ಇಪಿಇ) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.
ತಂತ್ರಜ್ಞಾನ ಮತ್ತು ಸವಲತ್ತುಗಳ ವಿಚಾರದಲ್ಲಿ ಶ್ರೀಮಂತವಾಗಿರುವ ಹಾಗೂ ಗಡುವಿಗಿಂತಲೂ ಮೊದಲೇ ಕಾಮಗಾರಿ ಪೂರ್ಣಗೊಂಡಿರುವ ಈ ಹೆದ್ದಾರಿಯ ಚಿತ್ರಣ ಹೀಗಿದೆ.
‘ಮೂಲಸೌಕರ್ಯ ಅಭಿವೃದ್ಧಿಯೇ ನಮ್ಮ ಮಂತ್ರ’
ಬಾಘ್ಪತ್: ‘ಮೂಲಸೌಕರ್ಯ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲಮಂತ್ರ. ನಮ್ಮ ಆಡಳಿತದ ಅವಧಿಯಲ್ಲಿ 28,000 ಕಿ.ಮೀ. ಉದ್ದದಷ್ಟು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕಾಗಿ ₹ 3 ಲಕ್ಷ ಕೋಟಿ ವಿನಿಯೋಗಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈಸ್ಟರ್ನ್ ಪೆರಿಫರಲ್ ಎಕ್ಸ್ಪ್ರೆಸ್ವೇ ಮತ್ತು ದೆಹಲಿ–ಮೀರಠ್ ಎಕ್ಸ್ಪ್ರೆಸ್ ವೇಯ ಮೊದಲನೇ ಹಂತವನ್ನು ಉದ್ಘಾಟಿಸಿದ ನಂತರ ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
‘ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪ್ರತಿದಿನ 17 ಕಿ.ಮೀ.ನಷ್ಟು ಹೆದ್ದಾರಿಯನ್ನಷ್ಟೇ ನಿರ್ಮಿಸಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಪ್ರತಿದಿನ 27 ಕಿ.ಮೀ.ನಷ್ಟು ಉದ್ದದ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿಲು ನೀಡಿದ್ದ ಗಡುವಿನ ಅರ್ಧದಷ್ಟು ಸಮಯದಲ್ಲೇ ಬಹುತೇಕ ಯೋಜನೆಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿವೆ’ ಎಂದು ಮೋದಿ ಹೇಳಿದರು.
‘ನಾವು ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಆದರೆ ನಾವು ರೈತರನ್ನು ಕಡೆಗಣಿಸಿದ್ದೇವೆ ಎಂದು ವಿರೋಧ ಪಕ್ಷಗಳು ಸುಳ್ಳು ಮತ್ತು ವದಂತಿಗಳನ್ನು ಹಬ್ಬಿಸುತ್ತಿವೆ. 70 ವರ್ಷ ದೇಶವನ್ನು ಆಳಿದ್ದ ಕಾಂಗ್ರೆಸ್, ಜನರಿಗೆ ದ್ರೋಹ ಬಗೆದಿದೆ. ಈಗ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಮತಯಂತ್ರಗಳು ಸರಿಯಿಲ್ಲ ಎನ್ನುತ್ತಿದೆ ಹಾಗೂ ಇನ್ನಿತರ ಸೂಕ್ಷ್ಮ ವಿಚಾರಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ’ ಎಂದು ಮೋದಿ ಆರೋಪಿಸಿದರು.
‘ನಾವು ರೈತರಿಗಾಗಿ ಹಲವು ಯೋಜನೆಗಳನ್ನು ಆರಂಭಿಸಲಿದ್ದೇವೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ಸಿಗುವಂತೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದರು.
‘ದಲಿತರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆ ಪ್ರಕರಣಗಳ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ’
– ನರೇಂದ್ರ ಮೋದಿ, ಪ್ರಧಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.