ADVERTISEMENT

ಅಪರಾಧಿ ಆರೀಫ್‌ ಗಲ್ಲಿಗೆ ಸುಪ್ರೀಂ ತಡೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2014, 9:42 IST
Last Updated 28 ಏಪ್ರಿಲ್ 2014, 9:42 IST

ನವದೆಹಲಿ  (ಪಿಟಿಐ/ ಐಎಎನ್‌ಎಸ್‌): ಕೆಂಪು ಕೋಟೆ ಮೇಲಿನ ದಾಳಿ ಪ್ರಕರಣದ ಅಪರಾಧಿ ಲಷ್ಕರ್–ಎ– ತೊಯ್ಬಾ ಸಂಘಟನೆಯ ಉಗ್ರ ಮೊಹಮ್ಮದ್‌ ಆರೀಫ್‌ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

‘ಆರೀಫ್‌ ಈಗಾಗಲೇ ಸುಮಾರು 14 ವರ್ಷಗಳಷ್ಟು ಶಿಕ್ಷೆ ಅನುಭವಿಸಿಯಾಗಿದೆ' ಎಂದು ಅಭಿಪ್ರಾಯ ‍ಪಟ್ಟ ಸುಪ್ರೀಂ ಕೋರ್ಟಿನ ನೂತನ ಮೂಖ್ಯ ನ್ಯಾಯಮೂರ್ತಿ ಆರ್‌ ಎಂ ಲೋಧಾ, ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ಹಾಗೂ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಅವರಿದ್ದ ಪೀಠ,  ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಿತು.

2000ರ ಡಿಸೆಂಬರ್‌ 22 ರಂದು ಲಷ್ಕರ್‌–ಎ–ತೊಯ್ಬಾ ಸಂಘಟನೆಯ ಉಗ್ರರು ಕೆಂಪು ಕೋಟೆಯ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

2000ರ ಡಿಸೆಂಬರ್‌ 25ರಂದು ಆರೀಫ್‌ ನನ್ನು ಬಂಧಿಸಲಾಗಿತ್ತು. 2005ರ ಅಕ್ಟೋಬರ್‌ 24ರಂದು ಆರೀಫ್‌ನನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯ, 2005 ಅಕ್ಟೋಬರ್‌ 31ರಂದು  ಗಲ್ಲು ಶಿಕ್ಷೆ ವಿಧಿಸಿತ್ತು.

ಅದನ್ನು ದೆಹಲಿ ಹೈಕೋರ್ಟ್‌ 2007ರ ಸೆಪ್ಟಂಬರ್‌ನಲ್ಲಿ ಎತ್ತಿ ಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್‌ ಕೂಡ ಹೈಕೋರ್ಟ್‌ ಆದೇಶವನ್ನು ಊರ್ಜಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.