ಭುವನೇಶ್ವರ (ಪಿಟಿಐ): ಬಂಗಾಳಕೊಲ್ಲಿಯಲ್ಲಿ ಬುಧವಾರ ಉಂಟಾಗಿರುವ ವಾಯಭಾರ ಕುಸಿತವು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಆಂಧ್ರ, ಒಡಿಶಾದ ಕರಾವಳಿ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
‘ಹುಡ್ಹುಡ್’ ಎಂದು ಹೆಸರಿಸಲಾದ ಈ ಚಂಡಮಾರುತ ಅಕ್ಟೋಬರ್ 12ರಂದು ವಿಶಾಖಪಟ್ಟಣಂ, ಕಳಿಂಗಪಟ್ಟಣಂ ಸೇರಿದಂತೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು ಕಟ್ಟೆಚ್ಚರಿಕೆ ವಹಿಸುವಂತೆ ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಗೋಪಾಲಪುರ ಕಡಲ ದಂಡೆಯಿಂದ 1170 ಕೀ.ಮೀ ದೂರದಲ್ಲಿರುವ ಉತ್ತರ ಅಂಡಮಾನ್ ಸಾಗರದಲ್ಲಿ ವಾಯುಭಾರ ಕುಸಿತ ಕೇಂದ್ರೀಕೃತವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ದಾಟುತ್ತಿದ್ದಂತೆ ಇದು ಗಂಟೆಗೆ 100ರಿಂದ 140 ಕೀ.ಮೀ ವೇಗದ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ ವರ್ಷ ವಿನಾಶಕಾರಿ ‘ಫೈಲಿನ್’ ಚಂಡಮಾರುತ ಒಡಿಶಾ ಮತ್ತು ಆಂಧ್ರ ಕರಾವಳಿಯ ಸಾವಿರಾರು ಜನರನ್ನು ಬೀದಿಪಾಲು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.