ಜಾರ್ಖಂಡ್: ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹತ್ಯೆ, ಮಗಳ ಸಾವಿಗೆ ನ್ಯಾಯ ಒದಗಿಸಿ ಎಂದು ಕಣ್ಣೀರಿಟ್ಟು ವೇದಿಕೆಗೆ ಬಂದ ವ್ಯಕ್ತಿಯೊಬ್ಬರನ್ನು ಜಾರ್ಖಂಡ್ ಮುಖ್ಯಮಂತ್ರಿ ಬೈದು ಹೊರತಳ್ಳಿದ ಘಟನೆ ನಡೆದಿದೆ.
ಬುಧವಾರ ಮಹಿಳಾದಿನಾಚರಣೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರೂ ಆಗಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಜಯ್ ಸಿಂಗ್ ಎಂಬವರು ತನ್ನ ಮಗಳು ಇಚ್ಛಿತಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹತ್ಯೆ, ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಿ ಎಂದು ಸಿಎಂ ಮುಂದೆ ಅಂಗಲಾಚಿದ್ದಾರೆ. ಸಂಜಯ್ ಸಿಂಗ್ ಅವರು ರಘುಭರ್ ದಾಸ್ ಅವರಲ್ಲಿ ಮಾತನಾಡಲೆಂದು ವೇದಿಕೆ ಹತ್ತಿದಾಗ ಸಿಟ್ಟಿಗೆದ್ದ ದಾಸ್, ಫೋಟೊ ತೆಗೆಸಿಕೊಳ್ಳುವ ಸಲುವಾಗಿ ರಾಜಕೀಯ ಮಾಡ್ತಾರೆ. ಇವರನ್ನು ಹೊರಗೆ ಕಳಿಸಿ. ಮಗಳು ಸತ್ತಿದ್ದಾಳೆ, ಅಪ್ಪ ರಾಜಕೀಯ ಮಾಡ್ತಾನೆ ಎಂದು ಹೇಳಿ ಅವಮಾನ ಮಾಡಿದ್ದಾರೆ.
2017 ಮಾರ್ಚ್ 3ರಂದು ಮೆಡಿಕಲ್ ಕೋರ್ಸ್ ಆಕಾಂಕ್ಷಿ 20ರ ಹರೆಯದ ಇಚ್ಛಿಚಾ ಸಿಂಗ್ ಸಾವಿಗೀಡಾಗಿದ್ದರು. ದಲ್ತೋನ್ಗಂಜ್ ನಿವಾಸಿಯಾದ ಇಚ್ಛಿತಾ, ಸ್ಥಳೀಯ ಕೋಚಿಂಗ್ ಸೆಂಟರ್ ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.
ಆದಾಗ್ಯೂ, ಇಚ್ಛಿತಾ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದೇ ಆಕೆಯ ಅಪ್ಪ ವಾದಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.