ನವದೆಹಲಿ: ಜಯಲಲಿತಾ ಸಾವಿನ ಕಾರಣ ತೆರವಾಗಿದ್ದ ತಮಿಳುನಾಡಿನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ಇದೇ 12ರಂದು ನಡೆಯಬೇಕಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ.
ಮತದಾರರನ್ನು ಸೆಳೆಯಲು ಭಾರಿ ಪ್ರಮಾಣದಲ್ಲಿ ಅಕ್ರಮ ಹಣ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಆಯೋಗ ಉಪಚುನಾವಣೆಯನ್ನು ರದ್ದುಗೊಳಿಸಲು ತೀರ್ಮಾನಿಸಿತು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಸಂಬಂಧಿ, ಅಭ್ಯರ್ಥಿ ಟಿಟಿವಿ ದಿನಕರನ್ ಅವರ ಪರ ಮತದಾರರಿಗೆ ಹಣ ಹಂಚಲು ಪಕ್ಷದ ನಾಯಕರು ತಮ್ಮ ಖಾತೆಗಳಿಂದ ₹ 89 ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಸಚಿವ ವಿಜಯಭಾಸ್ಕರ್ ಅವರಿಗೆ ಸೇರಿದ ಆಸ್ತಿಗಳು ಸೇರಿದಂತೆ ಒಟ್ಟು 35 ಕಡೆಗಳಲ್ಲಿ ಶುಕ್ರವಾರ ನಡೆಸಿದ ದಾಳಿ ಸಂದರ್ಭದಲ್ಲಿ ಈ ಬಗ್ಗೆ ದಾಖಲೆಗಳು ಲಭ್ಯವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ಚುನಾವಣೆಯನ್ನು ರದ್ದುಗೊಳಿಸಲು ನಿರ್ಧರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.