ADVERTISEMENT

ಆಸ್ತಿ ಹಂಚಿಕೆಯಲ್ಲಿ ಸಮಾನತೆ: ರಾಜ್ಯಪಾಲರ ಸಲಹೆ

ಆಂಧ್ರ– ತೆಲಂಗಾಣ ರಾಜ್ಯಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2014, 19:30 IST
Last Updated 21 ಜೂನ್ 2014, 19:30 IST

ಹೈದರಾಬಾದ್‌ (ಪಿಟಿಐ): ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ  ಮಧ್ಯೆ ಆಸ್ತಿ ಮತ್ತು ಸಾಲಸೋಲಗಳ ಹೊಣೆಗಾರಿಕೆಯ ಸಮಾನ ಹಂಚಿಕೆ ಬಗ್ಗೆ ಪುನರ್‌ ಪರಿಶೀಲನೆ ಅಗತ್ಯ ಎಂದು  ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌ ಹೇಳಿದರು.

ಆಂಧ್ರಪ್ರದೇಶ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಎರಡೂ ರಾಜ್ಯಗಳ ಮಧ್ಯೆ ಅಧಿಕಾರ ಹಂಚಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ವಿವಾದಗಳು ಬಗೆಹರಿಯಬೇಕಿದೆ ಎಂದರು.

‘ತೆಲುಗು ಭಾಷಿಕರು ಬಹುಕಾಲದಿಂದ ನಡೆದ ರಾಜ್ಯ ವಿಂಗಡನೆಯ ಪರ, ವಿರುದ್ಧ ಚಳವಳಿಗೆ ಸಾಕ್ಷಿಯಾಗಿದ್ದಾರೆ. ಅಖಂಡ ಆಂಧ್ರ ವಿಭಜನೆಯು ಜನತೆಯ ಭಾವನೆಗೆ ಧಕ್ಕೆ ತಂದಿದೆ. ಜನರ ಹೃದಯದ ಮೇಲಾಗಿರುವ ಗಾಯದ ಕಲೆ ಮಾಯವಾಗಲು ಕೆಲವು ಕಾಲ ಬೇಕಾಗುತ್ತದೆ’ ಎಂದು ತೆಲಂಗಾಣದ ರಾಜ್ಯಪಾಲರೂ ಆಗಿರುವ ಅವರು ಹೇಳಿದರು.

‘ಆಂಧ್ರ ಪ್ರದೇಶ ಪುನರ್‌ ವಿಂಗಡನೆ ಕಾಯ್ದೆಯಲ್ಲಿ ವಿಭಜಿತ ಆಂಧ್ರದ ಭಾಗಕ್ಕೆ ಕಲ್ಪಿಸಿರುವ ವ್ಯವಸ್ಥೆ ಈ ರಾಜ್ಯದ ಅಭಿವೃದ್ಧಿಗೆ ಸಾಲದು. ಹೊಸ ರಾಜಧಾನಿಯ ವಿಷಯವನ್ನು ಇನ್ನಷ್ಟು ಸ್ಪಷ್ಟ ಪಡಿಸುವ ಅಗತ್ಯವಿತ್ತು’ ಎಂದರು.

‘ಯೋಜನೇತರ ಖರ್ಚುವೆಚ್ಚಗಳಿಗೆ ₨15 ಸಾವಿರ ಕೋಟಿ ವಿತ್ತೀಯ ಕೊರತೆ ಇದೆ. ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ನೆರವು ನೀಡಬೇಕು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಕ್ರಿಯೆಗೆ ಕೇಂದ್ರ ಚುರುಕು ನೀಡಬೇಕು. ಜೊತೆಗೆ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ ಘೋಷಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.