ಕೊಹಿಮಾ : ₹ 50 ಲಕ್ಷ ಮೌಲ್ಯದ 1000 ಕೆ.ಜಿ ಗಾಂಜಾವನ್ನು ತಪಾಸಣಾ ಠಾಣೆ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಹಳಿಯಲ್ಲಿ ಶವ
ಮುಂಬೈ (ಪಿಟಿಐ): ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ) ಅಧ್ಯಕ್ಷ ನೀಲೇಶ್ ವಿಕಮ್ಸೆ ಅವರ ಪುತ್ರಿ ಪಲ್ಲವಿ (20) ಅವರ ಶವ ಇಲ್ಲಿನ ರೈಲು ಹಳಿಯೊಂದರ ಮೇಲೆ ಶುಕ್ರವಾರ ಪತ್ತೆಯಾಗಿದೆ.
ಕಾನೂನು ಪದವಿ ವಿದ್ಯಾರ್ಥಿನಿಯಾಗಿದ್ದ ಪಲ್ಲವಿ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಸಾವು
ನವದೆಹಲಿ (ಪಿಟಿಐ): ದೆಹಲಿ ಹೊರವಲಯದ ರನ್ಹೋಲಾ ಪ್ರದೇಶದಲ್ಲಿ ಸುಮಾರು 9 ಗಂಟೆಗಳ ಕಾಲ ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿದ್ದ 4 ಮತ್ತು 5 ವರ್ಷ ವಯಸ್ಸಿನ ಇಬ್ಬರು ಬಾಲಕರು ಉಸಿರುಗಟ್ಟಿ
ಮೃತಪಟ್ಟಿದ್ದಾರೆ.
ಒಬ್ಬ ಬಾಲಕನ ತಂದೆಗೆ ಸೇರಿದ ಈ ಕಾರಿನಲ್ಲಿ, ಪರಸ್ಪರ ಸಂಬಂಧಿಗಳಾದ ಈ ಬಾಲಕರು ಆಟವಾಡುತ್ತಿದ್ದರು. ಮನೆಯ ಸಮೀಪ ಈ ಕಾರನ್ನು ನಿಲ್ಲಿಸಲಾಗಿತ್ತು.
ಮಕ್ಕಳು ಕಾರಿನೊಳಗೆ ಇದ್ದ ಸಂಗತಿ ಮರೆತು ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಮೂಲಕ ಬಾಲಕನ ತಂದೆ ಕಾರನ್ನು ಲಾಕ್ ಮಾಡಿದ್ದರು. ಕೆಲವು ಗಂಟೆಗಳಾದರೂ ಮಕ್ಕಳು ಕಾಣಿಸದಿದ್ದಾಗ ಪೋಷಕರು ದೂರು ದಾಖಲಿಸಲು ನೆರೆಮನೆಯವರ ಕಾರಿನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದರು.
ಇದೇ ಸಂದರ್ಭದಲ್ಲಿ ಸಂಬಂಧಿಕರೊಬ್ಬರು
ಮಕ್ಕಳಿದ್ದ ಕಾರಿನ ಲಾಕ್ ತೆಗೆದಾಗ, ಅವರು ಉಸಿರುಗಟ್ಟಿ ಸತ್ತಿದ್ದುದು ತಿಳಿದುಬಂತು.
ಅಖಿಲೇಶ್ ಸಾರಥ್ಯ
ಆಗ್ರಾ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಖಿಲೇಶ್ ಯಾದವ್ ಅವಿರೋಧವಾಗಿ
ಆಯ್ಕೆಯಾಗಿದ್ದಾರೆ. ಅಪ್ಪ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಪಕ್ಷದಿಂದ ದೂರವಿಟ್ಟ ನಂತರ ಇದೀಗ ಅಖಿಲೇಶ್ ಪಕ್ಷದ ಮೇಲೆ ಇನ್ನಷ್ಟು ಹಿಡಿತ ಪಡೆದಂತಾಗಿದೆ.
ಆಗ್ರಾದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಹಿರಿಯ ಮುಖಂಡ ರಾಮ್ ಗೋಪಾಲ್ ಯಾದವ್ ಅವರು
ಅಖಿಲೇಶ್ ಆಯ್ಕೆಯನ್ನು ಘೋಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.