ನವದೆಹಲಿ (ಪಿಟಿಐ): ‘ಭಾರತದ ದಕ್ಷಿಣ ಹಾಗೂ ಪಶ್ಚಿಮ ರಾಜ್ಯಗಳು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಉತ್ತರಪ್ರದೇಶ, ಬಿಹಾರ ಸೇರಿದಂತೆ ಐದು ರಾಜ್ಯಗಳು ದೇಶ ಹಿಂದುಳಿಯಲು ಕಾರಣವಾಗಿದೆ’ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ದೆಹಲಿಯ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್ ಸ್ಮರಣಾರ್ಥ ಏರ್ಪಡಿಸಿದ್ದ ‘ಭಾರತ ಸುಧಾರಣೆಯ ಸವಾಲುಗಳು’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಈ ವಿಷಯ ತಿಳಿಸಿದರು.
‘ಪೂರ್ವಭಾಗದ ಬಿಹಾರ, ಉತ್ತರಪ್ರದೇಶ, ಛತ್ತೀಸಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಾಗಿ ದೇಶ ಹಿಂದುಳಿದಿದೆ, ಅದರಲ್ಲೂ ಸಾಮಾಜಿಕ ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ದಾಖಲಿಸಿದೆ. ಉದ್ಯಮ ಸೇರಿದಂತೆ ಆರ್ಥಿಕ ರಂಗದಲ್ಲಿ ಭಾರತ ಉತ್ತಮ ಪ್ರಗತಿ ತೋರಿದೆಯಾದರೂ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ತೀವ್ರವಾಗಿ ಹಿಂದುಳಿದಿದೆ. 188 ರಾಷ್ಟ್ರಗಳಲ್ಲಿ ಭಾರತ 131ನೇ ಸ್ಥಾನದಲ್ಲಿದೆ’ ಎಂದರು.
‘ದಕ್ಷಿಣ ಹಾಗೂ ಪಶ್ಚಿಮ ರಾಜ್ಯಗಳು ವೇಗವಾಗಿ ಅಭಿವೃದ್ಧಿಯಾಗಿ, ಉತ್ತಮ ಫಲಿತಾಂಶ ನೀಡುತ್ತಿವೆ. ಮಾನವ ಅಭಿವೃದ್ಧಿಯ ಸೂಚ್ಯಂಕ ಕುರಿತು ಗಮನ
ಹರಿಸಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಕಾರ್ಯಕ್ರಮಗಳಾಗಿದ್ದು, ಇದರಲ್ಲಿ ಹಿಂದುಳಿದಿದ್ದೇವೆ. ಇದಕ್ಕಾಗಿ ನಾವು ಜಿಲ್ಲಾವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.