ಕಟ್ರಾ /ಜಮ್ಮು ಮತ್ತು ಕಾಶ್ಮೀರ (ಐಎಎನ್ಎಸ್): ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅವರು, ಶುಕ್ರವಾರ ಇಲ್ಲಿ ವೈಷ್ಣೋದೇವಿ ಯಾತ್ರಿಕರ ಅನುಕೂಲಕ್ಕಾಗಿ ಉದಂಪುರ್–ಕಟ್ರಾ ರೈಲು ಮಾರ್ಗಕ್ಕೆ ಚಾಲನೆ ನೀಡಿದರು. ‘ಶ್ರೀ ಶಕ್ತಿ ಎಕ್ಸ್ಪ್ರಸ್’ ಎಂದು ಈ ಮಾರ್ಗಕ್ಕೆ ಹೆಸರಿಡಲಾಗಿದೆ.
‘ಉದಂಪುರ್ ಮತ್ತು ಕಟ್ರಾ ನಡುವೆ (25 ಕಿ.ಮೀ) ರೈಲು ಮಾರ್ಗ ಪ್ರಾರಂಭಿಸಬೇಕು, ಆ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎನ್ನುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ’ ಎಂದು ಮೋದಿ ಅವರು ರೈಲು ಮಾರ್ಗ ಉದ್ಘಾಟಿಸಿದ ಬಳಿಕ ಸುದ್ದಿಗಾರರಿಗೆ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳಿ ತರಲು ಸರ್ಕಾರ ಪ್ರಯತ್ನಿಸಲಿದೆ. ಇಲ್ಲಿನ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಅಮರನಾಥ ಯಾತ್ರೆ, ಮತ್ತು ರಂಜಾನ್ ಪ್ರಾರಂಭವಾಗಿರುವ ಸಂದರ್ಭದಲ್ಲೇ, ಈ ರೈಲು ಮಾರ್ಗಕ್ಕೆ ಚಾಲನೆ ನೀಡುತ್ತಿರುವುದು ಸಂತಸ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಶ್ಮೀರ ಕಣಿವೆಯಲ್ಲಿ ಜಲ ವಿದ್ಯುತ್ ಉತ್ಪಾದನೆ ಘಟಕವೊಂದನ್ನೂ ಮೋದಿ ಶುಕ್ರವಾರ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.