ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮನ್ ಅವರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗದಂತೆ ಅಮಾನತುಗೊಳಿಸಲು ಸಂಸತ್ ಸಮಿತಿ ಶಿಫಾರಸು ಮಾಡಿದೆ.
ಎಎಪಿ ಸಂಸದ ಭಗವಂತ್ ಮನ್ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು. ಈ ಸಂಬಂಧ ತನಿಖೆ ನಡೆಸಿರುವ ಸಂಸತ್ ಸಮಿತಿಯು ಮನ್ ಅವರನ್ನು ಅಮಾನತಿನಲ್ಲಿಡಲು ಗುರುವಾರ ಶಿಫಾರಸು ಮಾಡಿದ್ದು, ಚಳಿಗಾಲದ ಅಧಿವೇಶನದಿಂದ ಮನ್ ದೂರ ಉಳಿಯಬೇಕಾಗುತ್ತದೆ. ಈ ಕುರಿತು ಸಂಸತ್ ಶುಕ್ರವಾರ ನಿರ್ಣಯ ಕೈಗೊಳ್ಳಲಿದೆ.
ಹಿಂದಿನ ಸಂಸತ್ ಅಧಿವೇಶನದಲ್ಲಿ ವಿಡಿಯೋ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಬಳಿಕ ತಪ್ಪು ಒಪ್ಪಿಕೊಂಡಿದ್ದ ಭಗವಂತ್ ಮನ್ ಸಂಸತ್ತಿನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರು. ಆದರೆ, ಕ್ಷಮೆಯಾಚಿಸಿದರೆ ಸಾಲದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದ್ದರು.
ಮನೆಯಿಂದ ಸಂಸತ್ ಪ್ರವೇಶದವರೆಗೂ ಸಾಗುವ ಹಾದಿಯ ವಿಡಿಯೋ ಚಿತ್ರೀಕರಿಸಿ ಜುಲೈ 21ರಂದು ಸಂಸದ ಮನ್ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು. ಸಂಸತ್ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ನಡೆಸಿರುವ ಚಿತ್ರೀಕರಣದ ಕುರಿತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಜುಲೈ 25ರಂದು ಕಿರೀಟ್ ಸೋಮಯ್ಯ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಲು ಸೂಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.