ನವದೆಹಲಿ: ‘ಹಿಂದೂಸ್ತಾನ್ ಮಷಿನ್ ಟೂಲ್ಸ್’ (ಎಚ್ಎಂಟಿ) ಕೈಗಡಿಯಾರ ಹಾಗೂ ‘ತುಂಗಭದ್ರಾ ಉಕ್ಕು ಕಾರ್ಖಾನೆ’ ಸೇರಿದಂತೆ ಪುನಶ್ಚೇತನ ಅಸಾಧ್ಯವೆಂದು ಪರಿಗಣಿಸಲಾಗಿರುವ ಆರು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲಾಗುತ್ತಿದೆ.
ಸ್ವಯಂ ನಿವೃತ್ತಿ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲಾಗುವುದು ಎಂದು ಭಾರಿ ಕೈಗಾರಿಕಾ ಸಚಿವ ಅನಂತ ಗೀತೆ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಎಚ್ಎಂಟಿ ಕೈಗಡಿಯಾರ ಕಾರ್ಖಾನೆ 2000 ಇಸ್ವಿಯಿಂದ ನಷ್ಟದಲ್ಲಿದ್ದು ನೌಕರರ ಸಂಬಳ ಪಾವತಿಸಲು ಪರದಾಡುತ್ತಿದೆ. ಉಳಿದ ಉದ್ಯಮಗಳು ಇದೇ ಸ್ಥಿತಿಯಲ್ಲಿದ್ದು, ಕೇಂದ್ರ ಸರ್ಕಾರ ಸುಮಾರು 3,600 ನೌಕರರ ಸಂಬಳಕ್ಕೆ ಮೂರು ಸಾವಿರ ಕೋಟಿ ವ್ಯಯಿಸಿದೆ. ರೋಗಗ್ರಸ್ಥವಾಗಿರುವ ಕಾರ್ಖಾನೆಗಳನ್ನು ಇಟ್ಟುಕೊಂಡು ನೌಕರರಿಗೆ ಸಂಬಳ ಕೊಡುವ ಬದಲು ಸ್ವಯಂ ನಿವೃತ್ತಿ ಯೋಜನೆ ಅನುಷ್ಠಾನಕ್ಕೆ ತರುವುದು ಒಳ್ಳೆಯದು ಎಂದು ಸಚಿವರು ಹೇಳಿದರು.
ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿದ ಬಳಿಕ ಈ ಉದ್ಯಮಗಳ ಜಮೀನು ಹಾಗೂ ಯಂತ್ರೋಪಕರಣಗಳನ್ನು ಏನು ಮಾಡಬೇಕು? ಯಾವ ರೀತಿ ಬಳಕೆ ಮಾಡಬೇಕೆಂದು ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ಮುಚ್ಚಲು ಉದ್ದೇಶಿಸಿರುವ ಉದ್ಯಮಗಳಲ್ಲಿ ಎಚ್ಎಂಟಿ ಬೇರಿಂಗ್ಸ್, ಹಿಂದೂಸ್ತಾನ್ ಫೋಟೋ ಫಿಲ್್ಮ್ಸ ಹಾಗೂ ಹಿಂದೂಸ್ತಾನ್ ಕೇಬಲ್ ಲಿ. ಉದ್ಯಮಗಳು ಸೇರಿವೆ.
ಬಳ್ಳಾರಿಯಲ್ಲಿರುವ ತುಂಗಾಭದ್ರ ಉಕ್ಕು ಕಾರ್ಖಾನೆಯನ್ನು ಜಲಾಶಯದ ದೊಡ್ಡ ಗೇಟುಗಳನ್ನು ನಿರ್ಮಿಸುವ ಉದ್ದೇಶದಿಂದ 1960ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಶೇ. 79ರಷ್ಟು ಬಂಡವಾಳವನ್ನು ಕೇಂದ್ರ ಸರ್ಕಾರ ಉಳಿದ ಬಂಡವಾಳವನ್ನು ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಹೂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.