ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಎಡಿಜಿಪಿ ಡಾ.ಪಿ. ರವೀಂದ್ರನಾಥ್ ಅವರು ನಗರದ ಕನ್ನಿಂಗ್ಹ್ಯಾಂ ರಸ್ತೆಯ ‘ಓ ಬೋ ಪೆ’ ಹೋಟೆಲ್ನಲ್ಲಿ ಸೋಮವಾರ ಮೊಬೈಲ್ನಿಂದ ಯುವತಿಯರ ಆಕ್ಷೇಪಾರ್ಹ ಚಿತ್ರ ತೆಗೆದು ಅನುಚಿತವಾಗಿ ವರ್ತಿಸಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ (ಮೇ 26) ಮಧ್ಯಾಹ್ನ ಓ ಬೋ ಪೆ ಹೋಟೆಲ್ಗೆ ಬಂದಿದ್ದ ರವೀಂದ್ರನಾಥ್ ಅವರು ತಮ್ಮ ಮೊಬೈಲ್ನಿಂದ ಮತ್ತೊಂದು ಟೇಬಲ್ನಲ್ಲಿ
ಇಲಾಖೆಯಿಂದ ತನಿಖೆ: ಗೃಹ ಸಚಿವ ಜಾರ್ಜ್ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಪಿ.ರವೀಂದ್ರನಾಥ್ ಅವರಿಗೆ ಸಂಬಂಧಿಸಿದ ಪ್ರಕರಣದ ಕುರಿತು ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ‘ರಾಜೀನಾಮೆ ಸಲ್ಲಿಸಿರುವೆ’ ಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸಿರುವುದರಿಂದ ಹೀಗೆ ಆಗಿದೆ’ ಎಂದು ಅವರು ಆರೋಪಿಸಿದರು. |
ಕುಳಿತಿದ್ದ ಯುವತಿಯರ ಆಕ್ಷೇಪಾರ್ಹ ಭಂಗಿಯ ಛಾಯಾಚಿತ್ರ ತೆಗೆದಿದ್ದಾರೆ. ಅಲ್ಲದೆ, ಹಲವು ನಿಮಿಷಗಳವರೆಗೆ ಯುವತಿಯರ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ರವೀಂದ್ರನಾಥ್ ಅವರ ವರ್ತನೆಯಿಂದ ಕೆರಳಿದ ಯುವತಿಯರು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಆಗ ಕ್ಷಮೆ ಯಾಚಿಸಿ ಹೋಟೆಲ್ ನಿಂದ ಹೊರಡಲು ಮುಂದಾದ ರವೀಂದ್ರನಾಥ್ ಅವರ ಕೆನ್ನೆಗೆ ಹೊಡೆದ ಯುವತಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ತಳ್ಳಾಟ ಉಂಟಾಗಿ ರವೀಂದ್ರನಾಥ್, ಯುವತಿಯರ ಮೇಲೆ ಹಲ್ಲೆ ಮಾಡಲೆತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಯುವತಿಯರ ರಕ್ಷಣೆಗೆ ಬಂದ ಇತರೆ ಗ್ರಾಹಕರು ರವೀಂದ್ರನಾಥ್ ಅವರನ್ನು ಹಿಡಿದು ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡು ಥಳಿಸಿದ್ದಾರೆ. ಬಳಿಕ ಸಮೀಪದಲ್ಲೆ ಹೊಯ್ಸಳ ವಾಹನದಲ್ಲಿ ಗಸ್ತು ನಡೆಸುತ್ತಿದ್ದ ಹೈಗ್ರೌಂಡ್ಸ್ ಠಾಣೆಯ ಎಸ್ಐ ರವಿ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ರವಿ ಮತ್ತು ಸಿಬ್ಬಂದಿ ರವೀಂದ್ರನಾಥ್ ಅವರನ್ನು ಠಾಣೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ಠಾಣೆಗೆ ಬರಲು ನಿರಾಕರಿಸಿದ ಅವರು ಪೊಲೀಸರ ಜತೆಯೂ ವಾಗ್ವಾದ ನಡೆಸಿದ್ದಾರೆ.
ಎಡಿಜಿಪಿ ಅನುಚಿತ ವರ್ತನೆ
ಆ ನಂತರ ಪೊಲೀಸರು ಗ್ರಾಹಕರ ನೆರವಿನಿಂದ ಅವರನ್ನು ಹೊಯ್ಸಳ ವಾಹನದಲ್ಲಿ ಠಾಣೆಗೆ ಎಳೆದೊಯ್ದು ವಿಚಾರಣೆ ನಡೆಸಿದಾಗ ರವೀಂದ್ರನಾಥ್ ತಮ್ಮ ಪರಿಚಯ ಹೇಳಿಕೊಂಡು ಪೊಲೀಸ್ ಇಲಾಖೆಯ ಗುರುತಿನ ಚೀಟಿಯನ್ನು ತೋರಿಸಿದ್ದಾರೆ.
ಆದರೆ, ಆ ಗುರುತಿನ ಚೀಟಿ ನಕಲಿ ಎಂದು ಭಾವಿಸಿದ ಪೊಲೀಸರು ಅವರ ಬಟ್ಟೆ ಬಿಚ್ಚಿಸಿ ಗಂಟೆಗಟ್ಟಲೆ ವಿಚಾರಣೆ ನಡೆಸಿದ್ದಾರೆ. ನಂತರ ಇಡೀ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳು ಠಾಣೆಗೆ ಬಂದಾಗ ಸಿಬ್ಬಂದಿ ಕರೆದುಕೊಂಡು ಬಂದಿದ್ದ ವ್ಯಕ್ತಿ ಕೆಎಸ್ಆರ್ಪಿ ಎಡಿಜಿಪಿ ರವೀಂದ್ರನಾಥ್ ಎಂದು ಗೊತ್ತಾಗಿದೆ. ಬಳಿಕ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ.
ಯುವತಿಯಿಂದ ದೂರು: ಘಟನೆ ಸಂಬಂಧ ಯುವತಿ ರಾತ್ರಿ 10 ಗಂಟೆ ಸುಮಾರಿಗೆ ಹೈಗ್ರೌಂಡ್ಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ ಹೋಟೆಲ್ನಲ್ಲಿ ಮೊಬೈಲ್ನಿಂದ ನನ್ನ ಛಾಯಾಚಿತ್ರ ತೆಗೆದ. ಇದನ್ನು ಪ್ರಶ್ನಿಸಿದ್ದಕ್ಕೆ ಆತ ನನ್ನನ್ನು ಎಳೆದಾಡಿ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಲೆತ್ನಿಸಿದ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ತಪ್ಪು ಮಾಡಿಲ್ಲ: ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಮಂಗಳವಾರ ಬೆಳಿಗ್ಗೆ ಆಟೊದಲ್ಲಿ ಹೈಗ್ರೌಂಡ್ಸ್ ಠಾಣೆಗೆ ಬಂದ ರವೀಂದ್ರನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಆ ಯುವತಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಾನು ಅವರ ಛಾಯಾಚಿತ್ರವನ್ನೇ ತೆಗೆದಿಲ್ಲ. ಅವರು ಯಾರು ಎಂಬುದು ಗೊತ್ತಿಲ್ಲ. ಅವರಿಗೆ ನನ್ನ ಪರಿಚಯವೂ ಇಲ್ಲ. ಯುವತಿ ನನಗೆ ಕಪಾಳ ಮೋಕ್ಷ ಸಹ ಮಾಡಿಲ್ಲ’ ಎಂದು ತಿಳಿಸಿದರು.
‘ಹೋಟೆಲ್ನಲ್ಲಿ ಕುಳಿತಿದ್ದ ಅಪರಿಚಿತ ಗ್ರಾಹಕನೊಬ್ಬ ಯುವತಿಯರಿಗೆ ಪ್ರಚೋದನೆ ನೀಡಿ ನನ್ನ ಮೇಲೆ ಹಲ್ಲೆ ನಡೆಸಿ ಪರ್ಸ್ ಮತ್ತು ಮೊಬೈಲ್ ಕಿತ್ತುಕೊಂಡ. ಬಳಿಕ ಆತನೇ ಪೊಲೀಸರನ್ನು ಸ್ಥಳಕ್ಕೆ ಕರೆಸಿದ. ಆ ನಂತರ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದರು. ಆಗ ಪರ್ಸ್ ಮತ್ತು ಮೊಬೈಲ್ ವಾಪಸ್ ಕೊಡಿಸುವಂತೆ ಪೊಲೀಸರಿಗೆ ಕೇಳಿಕೊಂಡೆ’ ಎಂದು ಹೇಳಿದರು.
‘ಪೊಲೀಸರು ಠಾಣೆಯಲ್ಲಿ ನನ್ನ ಕನ್ನಡಕ ತೆಗೆಸಿ ನಿಕೃಷ್ಟವಾಗಿ ನಡೆಸಿಕೊಂಡರು. ಸರ್ಕಾರಿ ಸೇವೆಯಲ್ಲಿರುವ ನನ್ನನ್ನು ಲಾಕಪ್ಗೆ ಹಾಕಿದರು. ಇಷ್ಟೆಲ್ಲಾ ನಡೆದ ಮೇಲೆ ಪೊಲೀಸ್ ಸೇವೆಯಲ್ಲಿ ಏಕೆ ಮುಂದುವರಿಯಬೇಕು. ಈ ಬಗ್ಗೆ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ನನ್ನನ್ನು ಒಳಗೊಂಡಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಣ್ಣೀರಿಟ್ಟರು.
‘ಘಟನೆ ಸಂಬಂಧ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರನ್ನು ಭೇಟಿಯಾಗಿ ವಿವರ ನೀಡಿದ್ದೇನೆ ಎಂದರು. ‘ಕಮಿಷನರ್ ಔರಾದಕರ್ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಖುದ್ದು ಠಾಣೆಗೆ ಬಂದಿದ್ದರೂ ಆ ರೀತಿ ನೋಟಿಸ್ ನೀಡುವ ಔಚಿತ್ಯ ಏನಿತ್ತು. ಔರಾದಕರ್ ಅವರು ಆಂಧ್ರಪ್ರದೇಶ ಮೂಲದ ನನ್ನನ್ನು ಈ ಹಿಂದೆ ನಕ್ಸಲನಂತೆ ಬಿಂಬಿಸಲು ಯತ್ನಿಸಿದ್ದರು. ಕಚೇರಿಗೆ ಕರೆಸಿ ವಿದ್ಯಾಭ್ಯಾಸ ಮತ್ತು ವೈಯಕ್ತಿಕ ವಿವರಗಳ ಬಗ್ಗೆ ವಿಚಾರಣೆ ನಡೆಸಿದ್ದರು’ ಎಂದು ದೂರಿದರು.
ಮಾಹಿತಿ ಪಡೆದ ಸಿ.ಎಂ
ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಗೃಹ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ರವೀಂದ್ರನಾಥ್ ಕೂಡ ಬಂದಿದ್ದರು. ಸಭೆ ಬಳಿಕ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಘಟನೆ ಕುರಿತು ವಿವರ ಪಡೆದಿದ್ದಾರೆ. ಪ್ರಕರಣದ ಹಿಂದೆ ಕೆಲವು ಪೊಲೀಸ್ ಅಧಿಕಾರಿಗಳ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಳಿಯೂ ಎಡಿಜಿಪಿ ದೂರಿದ್ದಾರೆ.
ಪ್ರಕರಣ ವರ್ಗಾವಣೆ
ಘಟನೆ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಅಪರಾಧ ಸಂಚು ಮತ್ತು ಹಲ್ಲೆ ನಡೆಸಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದಿರುವ ಸ್ಥಳವು ಕಬ್ಬನ್ಪಾರ್ಕ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕಬ್ಬನ್ಪಾರ್ಕ್ ಠಾಣೆಗೆ ವರ್ಗಾಯಿಸಲಾಗುತ್ತದೆ
–ಬಿ.ಆರ್.ರವಿಕಾಂತೇಗೌಡ, ಡಿಸಿಪಿ, ಕೇಂದ್ರ ವಿಭಾಗ
ಆಕ್ಷೇಪಾರ್ಹ ಚಿತ್ರ
‘ಸಾಮಾನ್ಯ ಉಡುಗೆಯಲ್ಲಿ ಹೋಟೆಲ್ಗೆ ಬಂದಿದ್ದ ರವೀಂದ್ರನಾಥ್ ಅವರು ಮೊಬೈಲ್ನಿಂದ ಯುವತಿಯರ ಎದೆಯ ಭಾಗದ ನಾಲ್ಕೈದು ಚಿತ್ರಗಳನ್ನು ತೆಗೆದಿದ್ದಾರೆ. ಅಲ್ಲದೆ, ಹಲವು ನಿಮಿಷಗಳ ಕಾಲ ಯುವತಿಯರ ಆಕ್ಷೇಪಾರ್ಹ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಆ ಛಾಯಾಚಿತ್ರಗಳು ಮತ್ತು ದೃಶ್ಯಾವಳಿ ಮೊಬೈಲ್ನಲ್ಲೇ ಇದ್ದು, ತನಿಖೆಗಾಗಿ ಮೊಬೈಲ್ ಜಪ್ತಿ ಮಾಡಲಾಗಿದೆ. ಅದನ್ನು ನ್ಯಾಯಾಲಯಕ್ಕೆ ಸಾಕ್ಷಿಯ ರೂಪದಲ್ಲಿ ಸಲ್ಲಿಸಲಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಅಮಾನತಿಗೆ ಒತ್ತಾಯ
ಠಾಣೆಯಿಂದ ಹೊರ ಬಂದ ನಂತರ ರವೀಂದ್ರನಾಥ್ ಅವರು ನಗರದ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ರವೀಂದ್ರನಾಥ್ ತಮ್ಮನ್ನು ಠಾಣೆಗೆ ಎಳೆದೊಯ್ದಿದ್ದ ಹೈಗ್ರೌಂಡ್ಸ್ ಠಾಣೆಯ ಎಸ್ಐ ಮತ್ತು ಸಿಬ್ಬಂದಿ ವಿರುದ್ಧ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದರು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.