ನವದೆಹಲಿ : ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸಂಸದರು ಶನಿವಾರ ಮತ ಚಲಾಯಿಸಲಿದ್ದು ಎನ್ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಆಡಳಿತಾರೂಢ ಎನ್ಡಿಎಗೆ ಲೋಕಸಭೆಯಲ್ಲಿ ಬಹುಮತ ಇದೆ. ಹಾಗಾಗಿ ಎನ್ಡಿಎ ಅಭ್ಯರ್ಥಿ ಉಪರಾಷ್ಟ್ರಪತಿ ಆಗಲಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಸಂಜೆ 7 ಗಂಟೆಯ ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸಿದ್ದ ಬಿಜೆಡಿ ಮತ್ತು ಜೆಡಿಯು ಪಕ್ಷಗಳು ಗೋಪಾಲಕೃಷ್ಣ ಗಾಂಧಿ ಅವರಿಗೆ ಮತ ನೀಡಲು ನಿರ್ಧರಿಸಿವೆ.
ನಿತೀಶ್ ನೇತೃತ್ವದ ಜೆಡಿಯು ಬಿಹಾರದಲ್ಲಿ ಮಹಾಮೈತ್ರಿಕೂಟದಿಂದ ಹೊರಬಿದ್ದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದೆ. ಆದರೆ ಹಿಂದೆ ನಿರ್ಧರಿಸಿದಂತೆ ಗೋಪಾಲಕೃಷ್ಣ ಗಾಂಧಿ ಅವರಿಗೇ ಮತ ನೀಡುವುದಾಗಿ ಪಕ್ಷ ಹೇಳಿದೆ.
* ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅಧಿಕಾರಾವಧಿ ಇದೇ 10ಕ್ಕೆ ಕೊನೆಯಾಗಲಿದೆ
* ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯಲಿದೆ. ಹಾಗಾಗಿ ಪಕ್ಷಗಳು ವಿಪ್ ನೀಡುವಂತಿಲ್ಲ
* ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇದೆ
* ಲೋಕಸಭೆಯಲ್ಲಿ ಎರಡು ಮತ್ತು ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ. ಬಿಜೆಪಿಯ ಲೋಕಸಭಾ ಸದಸ್ಯ ಛೆಡಿ ಪಾಸ್ವಾನ್ ಅವರು ಚುನಾವಣೆಗೆ ಮೊದಲು ಸಲ್ಲಿಸುವ ಪ್ರಮಾಣಪತ್ರದಲ್ಲಿ ಮಾಹಿತಿ ಬಹಿರಂಗಪಡಿಸದ ಕಾರಣ ಅವರ ಸದಸ್ಯತ್ವನ್ನು ಪಟ್ನಾ ಹೈಕೋರ್ಟ್ ರದ್ದುಗೊಳಿಸಿದೆ.
ಪಕ್ಷಗಳ ಬಲಾಬಲ
425 -ವೆಂಕಯ್ಯ ಅವರಿಗೆ ನಿರೀಕ್ಷಿತ ಮತಗಳು
275 -ಗೋಪಾಲಕೃಷ್ಣ ಗಾಂಧಿ ಅವರಿಗೆ ನಿರೀಕ್ಷಿತ ಮತಗಳು
ಲೋಕಸಭೆ ಒಟ್ಟು ಸದಸ್ಯ ಬಲ: 545
ಎನ್ಡಿಎ: 338
ವಿರೋಧ ಪಕ್ಷಗಳು: 207
ರಾಜ್ಯಸಭೆ ಒಟ್ಟು ಸದಸ್ಯಬಲ: 243
ಎನ್ಡಿಎ: 85
ಕಾಂಗ್ರೆಸ್: 59
ಇತರರು: 99
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.