ಲಖನೌ: ಸಮಾಜವಾದಿ ಪಕ್ಷದಲ್ಲಿ (ಎಸ್ಪಿ) ಮತ್ತೆ ಕುಟುಂಬ ಕಲಹ ಭುಗಿಲೇಳುವ ಸಾಧ್ಯತೆ ಇದೆ. ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪ್ರತ್ಯೇಕವಾಗಿ ಪಕ್ಷದ ನೂತನ ಶಾಸಕರ ಸಭೆ ಕರೆದಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕಾಗಿ ಇಬ್ಬರೂ ಈ ಸಭೆ ಕರೆದಿದ್ದಾರೆ. ಸಭೆಯಲ್ಲಿ ಆಯ್ಕೆಯಾಗುವ ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲಿದ್ದಾರೆ.
ಅಖಿಲೇಶ್ ನೇತೃತ್ವದ ಸಭೆಯು ಮಂಗಳವಾರ ನಡೆಯಲಿದೆ. ಮುಲಾಯಂ ಅವರು ಬುಧವಾರ ಸಭೆ ಕರೆದಿದ್ದಾರೆ.
ಇಬ್ಬರೂ ನಾಯಕರು ಒಂದೇ ವಿಚಾರಕ್ಕೆ ಸಭೆಗಳನ್ನು ಕರೆದಿರುವುದರಿಂದ, ಅಲ್ಲಿ ಬೇರೆ ಬೇರೆ ಶಾಸಕರು ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಕಳೆದ ಶನಿವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಲಾಯಂ ಮತ್ತು ಶಿವಪಾಲ್ ಸಿಂಗ್ ಯಾದವ್ ಅವರು ಭಾಗವಹಿಸಿರಲಿಲ್ಲ. ಈ ಇಬ್ಬರಿಗೂ ಆಹ್ವಾನ ಇರಲಿಲ್ಲ ಎಂದು ಮೂಲಗಳು ಹೇಳಿವೆ.
ಕಾರ್ಯಕಾರಿಣಿ ನಂತರ ಮಾತನಾಡಿದ್ದ ಅಖಿಲೇಶ್, ಸೆ.30ರ ಒಳಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.