ನವದೆಹಲಿ: ಐಎನ್ಎಕ್ಸ್ ಮಾಧ್ಯಮ ಹಗರಣದಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
₹10 ಲಕ್ಷ ಮೊತ್ತದ ಖಾತ್ರಿ ಪತ್ರ ಸಲ್ಲಿಸಬೇಕು ಮತ್ತು ದೇಶದಿಂದ ಹೊರಹೋಗುವ ಮೊದಲು ಸಿಬಿಐ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಜಾಮೀನಿನ ಮೇಲೆ ಹೊರಗಿದ್ದಾಗ ಯಾವುದೇ ಸಾಕ್ಷ್ಯ ನಾಶಪಡಿಸದಂತೆ ನ್ಯಾಯಮೂರ್ತಿ ಎಸ್.ಪಿ. ಗರ್ಗ್ ತಾಕೀತು ಮಾಡಿದ್ದಾರೆ.
ಕಾರ್ತಿ ಚಿದಂಬರಂ ಪ್ರಭಾವಿ ವ್ಯಕ್ತಿಯಾಗಿದ್ದು ಈಗಾಗಲೇ ಅವರು ಈ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ. ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಆಕ್ಷೇಪಣೆ ಸಲ್ಲಿಸಿತು.
ಈಗಾಗಲೇ ಕಾರ್ತಿ ಅವರ ಪಾಸ್ಪೋರ್ಟ್ ಅನ್ನು ಅಧಿಕಾರಿಗಳ ವಶಕ್ಕೆ ನೀಡಲಾಗಿದ್ದು, ಅವರು ಯಾವುದೇ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿಲ್ಲ ಎಂದು ಕಾರ್ತಿ ಪರ ವಕೀಲರು ಸಮರ್ಥಿಸಿಕೊಂಡರು.
ಲಂಡನ್ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಿಬಿಐ ಅಧಿಕಾರಿಗಳು ಫೆಬ್ರುವರಿ 28ರಂದು ಬಂಧಿಸಿದ್ದರು. ಅವರ 12 ದಿನಗಳ ನ್ಯಾಯಾಂಗ ಬಂಧನ ಅವಧಿ ಶನಿವಾರ ಕೊನೆಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.