ADVERTISEMENT

ಕಪ್ಪುಹಣ ಘೋಷಣೆಗೆ ಮಾರ್ಚ್‌ವರೆಗೆ ಅವಕಾಶ

ಪಿಟಿಐ
Published 16 ಡಿಸೆಂಬರ್ 2016, 19:30 IST
Last Updated 16 ಡಿಸೆಂಬರ್ 2016, 19:30 IST

ನವದೆಹಲಿ (ಪಿಟಿಐ): 2017ರ ಮಾರ್ಚ್‌ 31ರವರೆಗೆ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ ಇರಿಸುವ ದಾಖಲೆರಹಿತ ಹಣವನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಅಡಿಯಲ್ಲಿ ಘೋಷಣೆ ಮಾಡುವುದಕ್ಕೆ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ.

ಹೀಗೆ ಸಕ್ರಮಗೊಳಿಸುವ ಹಣಕ್ಕೆ ಶೇ 50ರಷ್ಟು ತೆರಿಗೆ ಮತ್ತು ದಂಡ ವಿಧಿಸಲಾಗುವುದು. ಒಟ್ಟು ಮೊತ್ತದ ಶೇ 25ರಷ್ಟನ್ನು ನಾಲ್ಕು ವರ್ಷ ಬಡ್ಡಿರಹಿತ ಠೇವಣಿಯಾಗಿ ಇರಿಸಬೇಕಾಗುತ್ತದೆ. ಶೇ 25ರಷ್ಟು ಮೊತ್ತ ಮಾತ್ರ ದಾಖಲೆರಹಿತ ಹಣ ಹೊಂದಿದ್ದವರಿಗೆ ದೊರೆಯುತ್ತದೆ.

ನಂತರ ಕಪ್ಪುಹಣ ಪತ್ತೆಯಾದರೆ ಗರಿಷ್ಠ ಶೇ 87.25ರಷ್ಟು ತೆರಿಗೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ಸಡಿಲಿಕೆ:  ಬ್ಯಾಂಕ್‌ ಖಾತೆಯಿಂದ ನಗದು ತೆಗೆಯುವುದಕ್ಕೆ ಇರುವ ನಿರ್ಬಂಧ ಸಡಿಲಿಕೆ ಬಗ್ಗೆ ಡಿ. 30ರ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸಕ್ರಮ ಕಾಯ್ದೆಗೆ ರಾಷ್ಟ್ರಪತಿ ಅಂಕಿತ
* ದಾಖಲೆರಹಿತ ಹಣ ಸಕ್ರಮಗೊಳಿಸಲು ಅವಕಾಶ ನೀಡುವ ತೆರಿಗೆ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ಅಂಕಿತ
* ಗೋಪ್ಯವಾಗಿಯೇ ಇರಲಿದೆ ಕಪ್ಪುಹಣ ಘೋಷಣೆ ಮಾಹಿತಿ: ಘೋಷಿಸಿದವರ ವಿರುದ್ಧ ವಿಚಾರಣೆಗೆ ಮಾಹಿತಿ ಬಳಕೆ ಇಲ್ಲ
* ಕಪ್ಪುಹಣ ಘೋಷಣೆ ನಂತರ ವಿಚಾರಣೆಯಿಂದ ರಕ್ಷಣೆ ಪಡೆಯಲು ತೆರಿಗೆ ಪಾವತಿ ರಶೀತಿ
* ಬೇರೆಯವರ ಹಣವನ್ನು ತಮ್ಮ ಹೆಸರಿನಲ್ಲಿ ಯಾರೂ ಘೋಷಿಸಿಕೊಳ್ಳದಂತೆ ಸರ್ಕಾರದಿಂದ ಸೂಚನೆ
* ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಪಾವತಿಸಬೇಕಾದ ತೆರಿಗೆ ಶೇ 200ರಷ್ಟು ದಂಡ ವಿಧಿಸುವ ಆದಾಯ ತೆರಿಗೆ ಕಾಯ್ದೆಯ 270 ಎ ಸೆಕ್ಷನ್‌ ಈಗಲೂ ಅಸ್ತಿತ್ವದಲ್ಲಿದೆ. ಅಗತ್ಯ ಸಂದರ್ಭಗಳಲ್ಲಿ ಬಳಕೆಯಾಗಲಿದೆ: ಸರ್ಕಾರ ಸ್ಪಷ್ಟನೆ
* ನಿಷ್ಕ್ರಿಯ ಖಾತೆಗಳು ಮತ್ತು ಶೂನ್ಯ ಠೇವಣಿಯ  ಜನಧನ ಖಾತೆಗಳ ಠೇವಣಿ, ಸಾಲ ಮರುಪಾವತಿ, ನಗರ ಸಹಕಾರ ಬ್ಯಾಂಕುಗಳು, ಆರ್‌ಟಿಜಿಎಸ್‌ ಹಣ ವರ್ಗಾವಣೆ ಮೇಲೆ ಕಟ್ಟುನಿಟ್ಟಿನ ನಿಗಾ
* ರಾಜಕೀಯ ಪಕ್ಷಗಳು ಬ್ಯಾಂಕ್‌ಗೆ ಜಮೆ ಮಾಡುವ ಹಳೆಯ ₹500, ₹1,000 ನೋಟುಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. ಆದರೆ ಈ ಹಣಕ್ಕೆ ದಾಖಲೆ ಇರಬೇಕು ಮತ್ತು ಒಬ್ಬ ವ್ಯಕ್ತಿಯಿಂದ ₹20 ಸಾವಿರಕ್ಕಿಂತ ಹೆಚ್ಚು ಹಣ ಸ್ವೀಕರಿಸಿರಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.