ADVERTISEMENT

ಕಪ್ಪುಹಣ: ತನಿಖೆಗೆ ಎಸ್‌ಐಟಿ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST

ನವದೆಹಲಿ (ಪಿಟಿಐ): ವಿದೇಶಗಳಲ್ಲಿ ಭಾರತೀಯರು ಇರಿಸಿದ್ದಾರೆ ಎನ್ನಲಾದ ಕಪ್ಪುಹಣವನ್ನು ಸ್ವದೇಶಕ್ಕೆ ವಾಪಸು ತರುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರ  ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿ­ಕೊಂಡ ಮೇಲೆ ನಡೆದ ಮೊದಲ ಸಂಪುಟ ಸಭೆ­ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂ­ಕೋರ್ಟ್‌ನ ನಿವೃತ್ತ ನ್ಯಾ. ಎಂ.ಬಿ. ಷಾ  ಅಧ್ಯಕ್ಷತೆಯಲ್ಲಿ ರಚಿ­ಸಿ­ರುವ ಎಸ್‌ಐಟಿಗೆ ಮತ್ತೊಬ್ಬ ನಿವೃತ್ತ ನ್ಯಾ. ಅರಿಜಿತ್‌ ಪಸಾ­ಯತ್‌ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕಂದಾಯ ಸಚಿವಾಲಯದ ಕಾರ್ಯ­ದರ್ಶಿ, ಸಿಬಿಐ ಮತ್ತು ಗುಪ್ತಚರ ದಳದ ನಿರ್ದೇಶಕರು, ಜಾರಿ ನಿರ್ದೇ­ಶನಾಲ­ಯದ ಉನ್ನತ ಅಧಿಕಾರಿ, ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರು, ಭಾರ­ತೀಯ ರಿಸರ್ವ್ ಬ್ಯಾಂಕ್‌ನ ಉಪ­ಗೌರ್ನರ್‌ ಅವರು ಎಸ್‌ಐಟಿ ಸದಸ್ಯ­ರಾಗಿ­ರುತ್ತಾರೆ ಎಂದು ಒಂದೂವರೆ ತಾಸುಗಳ ಕಾಲ ನಡೆದ ಸಂಪುಟ ಸಭೆಯ ನಂತರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಪ್ಪುಹಣ ಕುರಿತ ಎಲ್ಲ ಪ್ರಕರಣಗಳ ಮೇಲ್ವಿಚಾರಣೆ­ಗಾಗಿ ವಾರ­ದೊಳಗೆ (ಮೇ 28) ಎಸ್‌ಐಟಿ ರಚನೆ ಮಾಡು­­ವಂತೆ ಸುಪ್ರೀಂ ಕೋರ್ಟ್‌ ಕಳೆದ ವಾರ ಸರ್ಕಾ­ರಕ್ಕೆ  ಗಡುವು ನೀಡಿತ್ತು. ಕಪ್ಪುಹಣದ ವಿರುದ್ಧ ಹೋರಾ­ಟಕ್ಕೆ ಸಮಗ್ರ ಕ್ರಿಯಾ ಯೋಜನೆ ನೀಡುವ ಎಸ್‌ಐಟಿ, ಇಂತಹ ಪ್ರಕರಣಗಳ ತನಿಖೆಗೆ ಕಾಯಂ ಆದ ಸಾಂಸ್ಥಿಕ ವ್ಯವಸ್ಥೆಯನ್ನು ಶಿಫಾರಸು ಮಾಡುತ್ತದೆ. ಜೊತೆಗೆ, ತನಗೆ ವಹಿಸಿರುವ ಕೆಲಸದ ಪ್ರಗತಿ ಬಗ್ಗೆ ಕಾಲಕಾಲಕ್ಕೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.