ನವದೆಹಲಿ (ಪಿಟಿಐ): ‘ವಿದೇಶಿ ಬ್ಯಾಂಕ್ನಲ್ಲಿ ಕಪ್ಪುಹಣ ಇಟ್ಟವರಲ್ಲಿ ಹಿಂದಿನ ಯುಪಿಎ ಸರ್ಕಾರದ ಒಬ್ಬ ಮಂತ್ರಿಯೂ ಸೇರಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.
ಆದರೆ ಆ ಮಂತ್ರಿ ಹೆಸರನ್ನು ಅವರು ಬಹಿರಂಗಗೊಳಿಸಿಲ್ಲ. ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಜೇಟ್ಲಿ ಅವರ ಬಾಯಿಬಿಡಿಸಲು ವಾಹಿನಿಯ ಸಂದರ್ಶನಕಾರ ಯತ್ನಿಸಿದಾಗ, ‘ನೀವು ಯಾರ ಕುರಿತು ಕೇಳುತ್ತಿದ್ದೀರಿ ಎಂಬುದು ನನಗೆ ಗೊತ್ತು. ಆದರೆ ಅದು ಅಧಿಕೃತವಾಗಿ ಪ್ರಕಟವಾಗಲು ಸೂಕ್ತ ಸಮಯದವರೆಗೂ ಕಾಯಿರಿ’ ಎಂದರು.
‘ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ಪಟ್ಟಿಯಲ್ಲಿರುವುದನ್ನು ನೀವು ಅಲ್ಲಗಳೆಯುತ್ತಿಲ್ಲ ಅಲ್ಲವೇ’ ಎಂದು ಸಂದರ್ಶನಕಾರರು ಕೇಳಿದಾಗ, ‘ನಾನು ಇದನ್ನು ಖಚಿತಪಡಿಸುತ್ತಲೂ ಇಲ್ಲ ಅಥವಾ ನಿರಾಕರಿಸುತ್ತಲೂ ಇಲ್ಲ. ನಾನು ಕೇವಲ ಮುಗುಳ್ನಗುತ್ತಿದ್ದೇನೆ’ ಎಂದು ಹೇಳಿ ಜಾರಿಕೊಂಡರು.
‘ಒಂದೊಮ್ಮೆ ನಮ್ಮ ಎದುರಾಳಿಗಳ ಹೆಸರು ಪಟ್ಟಿಯಲ್ಲಿದ್ದರೆ ಅದನ್ನು ಬಹಿರಂಗಪಡಿಸಲು ನನಗೆ ಹೆಚ್ಚಿನ ಉತ್ಸಾಹ ಮೂಡುತ್ತದೆ’ ಎಂದೂ ಜೇಟ್ಲಿ ಮತ್ತೊಂದು ಸಂದರ್ಭದಲ್ಲಿ ಹೇಳಿದರು.
ರಾಜಕೀಯ ವಲಯದಲ್ಲಿ ಭಾರಿ ಊಹಾಪೋಹ
‘ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕಾಗಲೀ ಅಥವಾ ಬಿಜೆಪಿಗಾಗಲೇ ಮುಚ್ಚಿಡುವಂತದ್ದು ಏನೂ ಇಲ್ಲ. ಹೆಸರನ್ನು ಬಹಿರಂಗಗೊಳಿಸಿದರೆ ಕಾಂಗ್ರೆಸ್ಗೇ ಹೆಚ್ಚಿನ ಮುಜುಗರವಾಗಲಿದೆ’ ಎಂದು ಜೇಟ್ಲಿ ಅವರು ಮೂರು ದಿನಗಳ ಹಿಂದೆ ಹೇಳಿದ್ದರು.
ಜೇಟ್ಲಿ ಹೀಗೆ ಹೇಳಿದ ನಂತರ ವಿದೇಶಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು ಯಾರಿರಬಹುದೆಂಬ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ದೊಡ್ಡ ಊಹೆಯೇ ನಡೆದಿದೆ. ಕೇಂದ್ರದ ಮಾಜಿ ಸಚಿವ, ಪ್ರಮುಖ ವ್ಯಾಪಾರೋದ್ಯಮ ಸಂಸ್ಥೆಯೊಂದಿಗೆ ಕೌಟುಂಬಿಕ ಸಂಬಂಧ ಹೊಂದಿರುವ ಮಾಜಿ ಸಚಿವರೊಬ್ಬರ ಮಗ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಕುಟುಂಬವೊಂದರ ಯುವ ನಾಯಕರೊಬ್ಬರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.