ನವದೆಹಲಿ: ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಣ ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ.ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿಯು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ಗೆ ಆರು ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಕ್ಕೆ ನ್ಯಾಯಮಂಡಳಿ ಹೇಳಿದೆ. ನ್ಯಾಯಮಂಡಳಿ ಈಗಾಗಲೇ ಕೃಷ್ಣಾ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿದೆ. ಐತೀರ್ಪಿನ ಬಗ್ಗೆ ಸ್ಪಷ್ಟನೆ ಕೇಳಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಗೊಳಿಸಿದೆ.
ಆದರೆ, ತೆಲಂಗಾಣ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವುದರಿಂದ ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆ ಸೆಕ್ಷನ್ 89ರಡಿ ಆ ರಾಜ್ಯಕ್ಕೂ ನೀರು ಹಂಚಿಕೆ ಆಗಬೇಕಿದೆ. ಇಡೀ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಹೊಸದಾಗಿ ಇತ್ಯರ್ಥಪಡಿಸಬೇಕು ಎಂಬ ನಿಲುವನ್ನು ತೆಲಂಗಾಣ ಹೊಂದಿದೆ. ಆಂಧ್ರ ಮತ್ತು ತೆಲಂಗಾಣದ ನಡುವೆ ನೀರು ಹಂಚಿಕೆ ಮಾಡುವಾಗ ಐತೀರ್ಪಿನ ಪುನರ್ ವ್ಯಾಖ್ಯಾನಕ್ಕೂ ಅವಕಾಶ ಇರುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆಂಧ್ರಕ್ಕೆ ನಿಗದಿಪಡಿಸಿರುವ ನೀರಿನಲ್ಲೇ ತೆಲಂಗಾಣಕ್ಕೂ ಹಂಚಿಕೆ ಮಾಡಬೇಕೇ ವಿನಾ ಕರ್ನಾಟಕಕ್ಕೆ ನಿಗದಿ ಮಾಡಿರುವ 907 ಟಿಎಂಸಿ ಅಡಿ ನೀರನ್ನು ಮುಟ್ಟಬಾರದೆಂಬ ನಿಲುವನ್ನು ಕರ್ನಾಟಕ ಸರ್ಕಾರ ತಳೆದಿದೆ.
ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಬೇಕು ಎಂದು ಮಹಾರಾಷ್ಟ್ರ ಆಗ್ರಹಿಸಿದೆ. ಕೆಲ ಸಮಸ್ಯೆ ನಡುವೆಯೂ ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಅಧಿ ಸೂಚನೆ ಪ್ರಕಟಿಸಿದೆ. ಅದೇ ರೀತಿ ಕೃಷ್ಣಾ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.