ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ತಿಂಗಳ ರೇಡಿಯೊ ಕಾರ್ಯಕ್ರಮ ಮೂರು ವರ್ಷ ಪೂರೈಸಿದೆ. ಜನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಯಣ ಎಂದು ಈ ಕಾರ್ಯಕ್ರಮದ ಕುರಿತು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಆಂದೋಲನ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ನೀಡಿದಂತಾಗಿದೆ. ಖಾದಿ ಉದ್ಯಮದಲ್ಲಿ ತೊಡಗಿರುವವರ ಮನೆಮನೆಗಳಲ್ಲಿ ಈ ದೀಪಾವಳಿ ಬೆಳಕು ನೀಡುವಂತೆ ಆಗಬೇಕು ಎಂದು ಹೇಳಿದರು.
ದೇಶದ ಪ್ರವಾಸೋದ್ಯಮ ಭಾರತೀಯರಿಂದಲೇ ಅಂತರರಾಷ್ಟ್ರೀಯಗೊಳ್ಳಬೇಕು. ಭಾರತವನ್ನು ಪ್ರವಾಸಿಯಾಗಿ ಮಾತ್ರ ನೋಡದೆ ವಿದ್ಯಾರ್ಥಿಯಾಗಿ ಕಾಣಬೇಕು. ದಾಲ್ ಸರೋವರದಿಂದ ವರ್ಷದಲ್ಲಿ 12 ಸಾವಿರ ಕೆ.ಜಿ. ತ್ಯಾಜ್ಯವನ್ನು ಹೊರತಂದು, ನೀರು ಸ್ವಚ್ಛಗೊಳಿಸಿರುವ ಶ್ರೀನಗರದ 18 ವರ್ಷದ ಬಿಲಾಲ್ ದಾರ್ಗೆ ಅಭಿನಂದಿಸಿದರು. ಸ್ವಚ್ಛತೆಯ ರಾಯಭಾರಿಯಾಗಿ ಈತನನ್ನು ಶ್ರೀನಗರದ ಮುನ್ಸಿಪಲ್ ಕಾರ್ಪೊರೇಷನ್ ಆಯ್ಕೆ ಮಾಡಿದೆ.
ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ ಅಭಿಯಾನದ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಕುರಿತು ಮಾತನಾಡಿದ್ದಾರೆ. 36ನೇ ಮನ್ ಕಿ ಬಾತ್ನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ದೀನ್ದಯಾಳ್ ಉಪಾಧ್ಯಾಯ ಅವರನ್ನು ನೆನಪಿಸಿಕೊಂಡು, ದೇಶಕ್ಕಾಗಿ ಸೇವೆ ಮಾಡಬೇಕೆಂದು ಸದಾ ತುಡಿಯುತ್ತಿದ್ದವರು ಎಂದರು.
ಈ ಕಾರ್ಯಕ್ರಮದ ಮುಖೇನ ನನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತಲೂ ಜನರ ಆಲೋಚನೆ ಹಾಗೂ ಮಹಾತ್ವಾಕಾಂಕ್ಷೆಯನ್ನು ಮುಂದಿಟ್ಟಿದ್ದೇನೆ. ಇಲ್ಲಿ ರಾಜಕೀಯ ದೂರವಿಟ್ಟು ಜನರೊಂದಿಗೆ ಬೆರೆಯಲು ಪ್ರಯತ್ನಿಸಿದ್ದೇನೆ ಹಾಗೂ ದೇಶದ ಸಕಾರಾತ್ಮ ಶಕ್ತಿಯನ್ನು ಬಿಂಬಿತವಾಗಿದೆ. ಜನರೊಂದಿಗೆ ಬೆರೆತು ಅವರದೇ ಮಾತುಗಳನ್ನು ವ್ಯಕ್ತಪಡಿಸುವ ಈ ಕಾರ್ಯಕ್ರಮವನ್ನು ’ನನ್ನ ಮನದ ಮಾತು’ ಎಂದು ನಾನೆಂದಿಗೂ ಹೇಳಿಲ್ಲ.
ಇ–ಮೇಲ್, ಫೋನ್, ಮೈಗೌಹಾಗೂ ನರೇಂದ್ರಮೋದಿ ಆ್ಯಪ್ಗಳ ಮೂಲಕ ಜನರು ನೀಡಿರುವ ಅಭಿಪ್ರಾಯವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.