ಶ್ರೀನಗರ, ಜಮ್ಮು ಮತ್ತು ಕಾಶ್ಮೀರ(ಐಎಎನ್ಎಸ್): ಗಡಿ ನಿಯಂತ್ರಣ ರೇಖೆಯ(ಎಲ್ಒಸಿ) ಭಾರತದ ಪಾರ್ಶ್ವದಲ್ಲಿ ನುಸುಳಲು ಯತ್ನಿಸುತ್ತಿದ್ದ ಐವರು ಗೇರಿಲ್ಲಾಗಳನ್ನು ಭದ್ರತಾ ಪಡೆಗಳು ಕೊಂದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಭಾರತದ ಯೋಧರೊಬ್ಬರು ವೀರ ಮರಣವನ್ನಪ್ಪಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಉಕ್ರಿ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ‘ಎಲ್ಒಸಿಯಲ್ಲಿ ಶಂಕಿತ ಓಡಾಟ ಕಂಡುಬಂತು. ಈ ವೇಳೆಗೆ ಪರಸ್ಪರ ಗುಂಡಿನ ಕಾಳಗ ನಡೆಯಿತು. ದಾಳಿಯಲ್ಲಿ ಒಬ್ಬ ಗೇರಿಲ್ಲಾ ಮೃತಪಟ್ಟ. ಯೋಧರೊಬ್ಬರಿಗೆ ಚಿಕ್ಕ ಗಾಯಗಳಾದವು. ಸಂಜೆಯ ಬಳಿಕ ಮತ್ತೆ ಗುಂಡಿನ ದಾಳಿ ನಡೆಯಿತು. ನಾಲ್ವರು ಗೇರಿಲ್ಲಾಗಳು ಸಾವನ್ನಪ್ಪಿದರು.ನಮ್ಮ ಕಡೆಯ ಯೋಧರೊಬ್ಬರು ಹುತಾತ್ಮರಾದರು’ ಎಂದೂ ಅವರು ತಿಳಿಸಿದ್ದಾರೆ.
ಭಾರತ ಗಡಿಯಲ್ಲಿ ನುಸುಳಲು ಉಗ್ರರು ಸಂಚು ರೂಪಿಸಿದ್ದರು ಎಂದಿರುವ ಅವರು, ವ್ಯತಿರಿಕ್ತ ವಾತಾವರಣದಿಂದಾಗಿ ಮೃತ ಗೇರಿಲ್ಲಾಗಳ ದೇಹಗಳನ್ನು ವಶಕ್ಕೆ ಪಡೆಯಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಗೇರಿಲ್ಲಾಗಳು ಭಾರತದೊಳಗೆ ನುಸುಳುವ ಯತ್ನ ವಿಫಲಗೊಳಿಸಿರುವುದರಿಂದ ಕೆಲವು ಗೇರಿಲ್ಲಾಗಳು ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.