ನವದೆಹಲಿ (ಐಎಎನ್ಎಸ್): ಚಳಿಯ ಕೊರೆತ ಹಾಗೂ ಮಂಜಿನ ಮುಸುಕು ದೆಹಲಿಯಲ್ಲಿ ತೀವ್ರವಾಗಿದೆ. ಸೋಮವಾರ 4.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳ ಅವಧಿಯ ಅತ್ಯಂತ ಕನಿಷ್ಠ ಉಷ್ಣಾಂಶವಾಗಿದೆ.
ದಟ್ಟ ಮಂಜು ಮುಸುಕಿರುವ ಕಾರಣದಿಂದ 50 ರೈಲುಗಳ ಸಂಚಾರ ತಡವಾಗಿದೆ. 12 ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆಯಾಗಿದೆ.
‘ದಟ್ಟ ಮಂಜಿನ ಕಾರಣದಿಂದ ದೇಶದ ವಿವಿಧ ಭಾಗಗಳಿಂದ ಬರಬೇಕಾಗಿದ್ದ 50 ರೈಲುಗಳು ತಡವಾಗಿ ಬಂದಿವೆ. 12 ರೈಲುಗಳ ಸಂಚಾರ ಸಮಯ ಬದಲಾಗಿದ್ದು, ಒಂದು ರೈಲಿನ ಸಂಚಾರ ರದ್ದಾಗಿದೆ’ ಎಂದು ಉತ್ತರ ವಲಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
‘ದಿನವಿಡೀ ಚಳಿ ಹೆಚ್ಚಾಗಿರಲಿದ್ದು, ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಗರಿಷ್ಠ ಉಷ್ಣಾಂಶ ಸುಮಾರು 16 ಡಿಗ್ರಿ ಸೆಲ್ಸಿಯಸ್ ಇದ್ದು, ಬೆಳಿಗ್ಗೆ 8.30ಕ್ಕೆ ವಾತಾವರಣದ ತೇವಾಂಶ ಶೇ 97 ರಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಜಮ್ಮು– ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಚಳಿಯ ಆರ್ಭಟ ಹೆಚ್ಚಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.