ನವದೆಹಲಿ: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾಟ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ದೆಹಲಿ ಮೆಟ್ರೊ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
ಜನವರಿ 29ರಂದು ಆರಂಭವಾದ ಪ್ರತಿಭಟನೆ ಇದೀಗ 50ನೇ ದಿನಕ್ಕೆ ಕಾಲಿರಿಸಿದೆ.
ಭಾನುವಾರ ಮಧ್ಯರಾತ್ರಿಯಿಂದ ದೆಹಲಿ ನಗರದ ಹೆಚ್ಚಿನ ಮೆಟ್ರೊ ರೈಲು ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಸೆಂಟ್ರಲ್ ದೆಹಲಿಯಲ್ಲಿರುವ 12 ನಿಲ್ದಾಣಗಳನ್ನು ರಾತ್ರಿ ಎಂಟು ಗಂಟೆಯ ನಂತರ ಮುಚ್ಚಲಾಗುವುದು. ಮುಂದಿನ ಆದೇಶ ಲಭಿಸುವವರೆಗೆ ಈ ನಿಲ್ದಾಣಗಳು ಮುಚ್ಚಿರುತ್ತವೆ ಎಂದು ಬಲ್ಲಮೂಲಗಳು ಹೇಳಿವೆ.
ದೆಹಲಿ ಪೊಲೀಸರ ಆದೇಶದ ಪ್ರತಿ ಇಲ್ಲಿದೆ
342317862 Traffic Advisory by Prajavani Kannada Daily on Scribd
ಅದೇ ವೇಳೆ ದೆಹಲಿ-ಹರಿಯಾಣ ಗಡಿಭಾಗದಲ್ಲಿರುವ ಮೆಟ್ರೊ ನಿಲ್ದಾಣಗಳನ್ನು ರಾತ್ರಿ 11.30ಕ್ಕೆ ಮುಚ್ಚಲಾಗುವುದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ ದೆಹಲಿಗೆ ಇರುವ ಪ್ರಧಾನ ಮೆಟ್ರೊ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೆಹಲಿ ಪೊಲೀಸರು ಆದೇಶಿಸಿದ್ದಾರೆ. ಮೆಟ್ರೊ ರೈಲು ಸೇವೆ ಸ್ಥಗಿತ ದೆಹಲಿ ಜನಜೀವನದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಲಿದೆ.
ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರಟರಿಯೇಟ್, ಉದ್ಯೋಗ್ ಭವನ್, ಲೋಕ್ ಕಲಾನ್ ಮಾರ್ಗ್, ಜನ್ಪಥ್, ಮಂಡಿ ಹೌಸ್, ಬಾರಾಕಂಬಾ ರೋಡ್, ಆರ್.ಕೆ ಆಶ್ರಂ ಮಾರ್ಗ್, ಪ್ರಗತಿ ಮೈದಾನ್, ಖಾನ್ ಮಾರ್ಕೆಟ್, ಶಿವಾಜಿ ಸ್ಟೇಡಿಯಂ ಮೊದಲಾದ ಮೆಟ್ರೊ ರೈಲು ನಿಲ್ದಾಣಗಳು ಕಾರ್ಯವೆಸಗುವುದಿಲ್ಲ.
[related]
ಏತನ್ಮಧ್ಯೆ, ಜನರ ಸಂಚಾರಕ್ಕೆ ಯಾವುದೇ ತೊಂದರೆಯುಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಕಳೆದ ವರ್ಷ ಜಾಟ್ ಸಮುದಾಯದವರು ನಡೆಸಿದ ಪ್ರತಿಭಟನೆಯಲ್ಲಿ 30 ಮಂದಿ ಸಾವಿಗೀಡಾಗಿದ್ದು, 200 ಮಂದಿಗೆ ಗಾಯಗಳಾಗಿತ್ತು, 2016 ಫೆಬ್ರುವರಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ 100 ಕೋಟಿ ಮೌಲ್ಯದ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳಿಗೆ ಹಾನಿಯಾಗಿತ್ತು,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.