ಪಟ್ನಾ (ಪಿಟಿಐ): ಬಿಹಾರದಲ್ಲಿ ಮಾಂಝಿ ಅವರ ನೇತೃತ್ವದ ಹೊಸ ಸರ್ಕಾರ ರಚನೆಗೆ ಕಾಂಗ್ರೆಸ್ ತನ್ನ ಬೆಂಬಲ ಮುಂದುವರಿಸಲು ನಿರ್ಧರಿಸಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ನಿಯೋಗ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಬೆಂಬಲ ಪತ್ರ ನೀಡಿದೆ.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ನಿರ್ದೇಶನದಂತೆ ಬಿಹಾರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಶೋಕ್ ಚೌಧರಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತು. ನಾಲ್ವರು ಕಾಂಗ್ರೆಸ್ ಶಾಸಕರ ಬೆಂಬಲದಿಂದ ವಿಧಾನಸಭೆಯಲ್ಲಿ ನೂತನ ಜೆಡಿಯು ಸರ್ಕಾರದ ಸದಸ್ಯ ಬಲ 124ಕ್ಕೆ ಏರಿದೆ.
ಆದರೆ ಬೆಂಬಲ ನೀಡುವ ಕುರಿತು ಕಾಂಗ್ರೆಸ್ನಿಂದ ಯಾವುದೇ ಸೂಚನೆ ದೊರೆತಿಲ್ಲ ಎಂದು ಜೆಡಿಯು ನೂತನ ನಾಯಕ ಜೀತನ್ ರಾಮ್ ಮಾಂಝಿ ಪ್ರತಿಕ್ರಿಯಿಸಿದರು.
ಬಿಹಾರದಲ್ಲಿ ಜತ್ಯಾತೀತ ಸರ್ಕಾರಕ್ಕೆ ಕಾಂಗ್ರೆಸ್ ಬೇಷರತ್ತಾಗಿ ಬೆಂಬಲ ನೀಡಲಿದೆ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಾಧ್ಯಮ ಉಸ್ತುವಾರಿ ಪ್ರೇಮ್ ಚಂದ್ ಮಿಶ್ರಾ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್, ಮಾಂಝಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಸೋಮವಾರ ಸೂಚಿಸಿದ್ದರು. ಹೊಸ ಸರ್ಕಾರ ರಚನೆಗಾಗಿ ಜೆಡಿಯುದ 117, ಇಬ್ಬರು ಪಕ್ಷೇತರರು, ಹಾಗೂ ಒಬ್ಬ ಸಿಪಿಐ ಸದಸ್ಯ ಸೇರಿದಂತೆ 120 ಬೆಂಬಲಿಗ ಶಾಸಕರ ಹೆಸರುಗಳುಳ್ಳ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.