ADVERTISEMENT

ಜೈಷ್‌ ಮುಖ್ಯಸ್ಥ ಮಸೂದ್‌ ವಿರುದ್ಧ ಆರೋಪ ಪಟ್ಟಿ

ಪಠಾಣ್‌ಕೋಟ್‌ ವಾಯು ನೆಲೆ ಮೇಲಿನ ದಾಳಿ * ತನಿಖೆ ಪೂರ್ಣಗೊಳಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ

ಪಿಟಿಐ
Published 19 ಡಿಸೆಂಬರ್ 2016, 19:30 IST
Last Updated 19 ಡಿಸೆಂಬರ್ 2016, 19:30 IST
ಮಸೂದ್‌ ಅಜರ್‌: ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ, ಪಾಕಿಸ್ತಾನದ ಬವಾಲ್‌ಪುರ ನಿವಾಸಿ
ಮಸೂದ್‌ ಅಜರ್‌: ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ, ಪಾಕಿಸ್ತಾನದ ಬವಾಲ್‌ಪುರ ನಿವಾಸಿ   

ನವದೆಹಲಿ : ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪೂರ್ಣಗೊಳಿಸಿದೆ.

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಷ್‌ ಎ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ ಸೇರಿ ನಾಲ್ವರ ವಿರುದ್ಧ ಭಯೋತ್ಪಾದನಾ ದಾಳಿ ಸಂಚಿನ ಆರೋಪ ಹೊರಿಸಲಾಗಿದೆ. ಜನವರಿ 2ರಂದು ನಡೆದ ದಾಳಿಯಲ್ಲಿ ಏಳು ಯೋಧರು ಮೃತಪಟ್ಟರೆ 37 ಮಂದಿ ಗಾಯಗೊಂಡಿದ್ದರು.
ಪಂಚಕುಲದ ಎನ್‌ಐಎ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆ, ಸ್ಫೋಟಕಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ.

ಅಜರ್‌, ಆತನ ಸಹೋದರ ಮುಫ್ತಿ ಅಬ್ದುಲ್‌ ರವೂಫ್‌ ಅಸ್ಘರ್‌, ಪಾಕಿಸ್ತಾನದಲ್ಲಿಯೇ ಕುಳಿತು ದಾಳಿಯನ್ನು ನಿರ್ವಹಿಸಿದ ಶಾಹಿದ್‌ ಲತೀಫ್‌ ಮತ್ತು ಕಾಶಿಫ್‌ ಜಾನ್‌ ಅವರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ADVERTISEMENT

ದಾಳಿಯಲ್ಲಿ ಎಷ್ಟು ಜನರು ಭಾಗಿಯಾಗಿದ್ದರು ಎಂಬ ಪ್ರಶ್ನೆಗೂ ಆರೋಪಪಟ್ಟಿ ಉತ್ತರ ಕೊಟ್ಟಿದೆ. ಆರೋಪಪಟ್ಟಿಯಲ್ಲಿ ನಾಲ್ವರು ಉಗ್ರರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ.

ದಾಳಿಯಲ್ಲಿ ಆರು ಉಗ್ರರು ಭಾಗಿಯಾಗಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಮತ್ತು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ ನೀಡಿದ್ದು ಗೊಂದಲಕ್ಕೆ ಕಾರಣವಾಗಿತ್ತು.

ಪಠಾಣ್‌ಕೋಟ್‌ ವಾಯುನೆಲೆಯ ಭದ್ರತೆಯಲ್ಲಿ ಲೋಪ ಇತ್ತು ಎಂದು ಎನ್‌ಐಎ ಹೇಳಿದೆ. ದಾಳಿ ನಡೆಸಿದ ಉಗ್ರರಾದ ನಾಸಿರ್‌ ಹುಸೇನ್‌, ಹಾಫಿಜ್‌ ಅಬುಬಕರ್‌, ಉಮರ್‌ ಫಾರೂಕ್‌ ಮತ್ತು ಅಬ್ದುಲ್‌ ಖಯ್ಯೂಂ ಜೈಷ್‌ ಸಂಘಟನೆಗೆ ಸೇರಿದವರು. ಇವರೆಲ್ಲರೂ ಪಾಕಿಸ್ತಾನದ ಪ್ರಜೆಗಳು ಎಂಬ ಮಾಹಿತಿಯನ್ನೂ ನೀಡಲಾಗಿದೆ.

ನಿಷೇಧ ಹೇರಿಕೆ ಪ್ರಯತ್ನಕ್ಕೆ ಬಲ: ಮಸೂದ್‌ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರುವಂತೆ ಮಾಡಲು ಈ ಆರೋಪಪಟ್ಟಿಯನ್ನು ಭಾರತ ಬಳಸಿಕೊಳ್ಳುವ ಸಾಧ್ಯತೆ ಇದೆ. ಆತನ ಮೇಲೆ ನಿಷೇಧ ಹೇರುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ ತಡೆ ಒಡ್ಡುತ್ತಿದೆ.

ಬಿಡುಗಡೆಗಾಗಿ ವಿಮಾನ ಅಪಹರಣ: 1999ರಲ್ಲಿ ಭಾರತದ ಸೆರೆಮನೆಯಲ್ಲಿದ್ದ ಮಸೂದ್‌ನನ್ನು ಉಗ್ರರು ವಿಮಾನ ಅಪಹರಿಸಿ ಬಿಡಿಸಿಕೊಂಡರು. ಇಂಡಿಯನ್‌ ಏರ್‌ಲೈನ್ಸ್‌ನ ಐಸಿ 814 ವಿಮಾನವನ್ನು ಅಪಹರಿಸಿದ ಉಗ್ರರು ಅದರಲ್ಲಿದ್ದವರ ಬಿಡುಗಡೆ ಮಾಡಲು ಮಸೂದ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂಬ  ಷರತ್ತು ಒಡ್ಡಿದ್ದರು.  ಹೀಗೆ ಆತ ಬಿಡುಗಡೆಗೊಂಡ.

19 ತಾಸು ಸುಮ್ಮನಿದ್ದರು
ಜನವರಿ 1ರಂದು ಬೆಳಗ್ಗೆ 8.40ಕ್ಕೆ ಉಗ್ರರು ವಾಯುನೆಲೆ ಪ್ರವೇಶಿಸಿದ್ದರು. ಅವರು ಅಲ್ಲಿದ್ದ ಒಂದು ಚರಂಡಿ ಮತ್ತು  ಮಿಲಿಟರಿ ಎಂಜಿನಿಯರಿಂಗ್‌ ಸರ್ವಿಸಸ್‌ನ ಕಟ್ಟಡದೊಳಗೆ ಅವಿತುಕೊಂಡಿದ್ದರು. ಜನವರಿ 2ರಂದು ರಾತ್ರಿ 3.20ರ ನಂತರ ಅವರು ಗುಂಡಿನ ಕಾಳಗ ಆರಂಭಿಸಿದ್ದರು. ವಾಯುನೆಲೆ ಪ್ರವೇಶಿಸಿದ ನಂತರ 19 ತಾಸು ಅವರು ಸುಮ್ಮನೆ ಕುಳಿತಿದ್ದರು.

ಆರೋಪಿಗಳು ಸಾಕ್ಷ್ಯಗಳು
* ಸಿಂಬಲ್‌ ಗಡಿಠಾಣೆ ಸಮೀಪದ ಕಾಡಿನ ಮೂಲಕ ಉಗ್ರರು ಒಳ ನುಸುಳಿದರು. ಪಾಕಿಸ್ತಾನದಲ್ಲಿ ತಯಾರಾದ ಆಹಾರದ ಖಾಲಿ ಪೊಟ್ಟಣಗಳು ಮತ್ತು ಆಹಾರ ಸಾಮಗ್ರಿಗಳು ಈ ಪ್ರದೇಶದಲ್ಲಿ ದೊರೆತಿವೆ.

* ಇಲ್ಕಾರ್‌ ಸಿಂಗ್‌ ಎಂಬ ಚಾಲಕನನ್ನು ಅಪಹರಿಸಿದ ಉಗ್ರರು ನಾಲ್ಕನೇ ಆರೋಪಿಯಾದ ಕಾಶಿಫ್‌ನನ್ನು ಸಂಪರ್ಕಿಸಲು ಚಾಲಕನ ಫೋನ್‌ ಬಳಸಿದ್ದಾರೆ. ಈ ಫೋನ್‌ ಮೂಲಕ ಇತರರನ್ನೂ ಅವರು ಸಂಪರ್ಕಿಸಿದ್ದಾರೆ. ಅವರು ಸಂಪರ್ಕಿಸಿದ ದೂರವಾಣಿ ಸಂಖ್ಯೆಗಳನ್ನು ಉಲ್ಲೇಖಿಸಲಾಗಿದೆ.

* ಇಲ್ಕಾರ್‌ ಸಿಂಗ್‌ ಅವರನ್ನು ಕೊಂದ ಉಗ್ರರು ಅವರ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಮೃತ ಉಗ್ರನೊಬ್ಬನಿಂದ ವಶಕ್ಕೆ ಪಡೆಯಲಾದ ಚಾಕುವಿನಲ್ಲಿ ಇಲ್ಕಾರ್‌ ಸಿಂಗ್‌ ಡಿಎನ್‌ಎ ಅಂಶಗಳು ದೊರೆತಿವೆ.

* ಇಲ್ಕಾರ್‌ ಸಿಂಗ್‌ ವಾಹನದಲ್ಲಿ ದೊರೆತ ಪಾನೀಯ ಬಾಟಲಿಗಳಲ್ಲಿ ಇಬ್ಬರು ಉಗ್ರರ ಡಿಎನ್‌ಎ ಅಂಶಗಳು ದೊರೆತಿವೆ.

* ಎಸ್‌ಪಿ ಸಲ್ವಿಂದರ್‌ ಸಿಂಗ್‌ ಮತ್ತು ಇತರ ಇಬ್ಬರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಅಪಹರಣ. ಅವರಲ್ಲಿದ್ದ ಮೂರು ಮೊಬೈಲ್‌ ಕಸಿದು ಅದರ ಮೂಲಕ ಪಾಕಿಸ್ತಾನದ ಕೆಲವು ಸಂಖ್ಯೆಗಳನ್ನು ಸಂಪರ್ಕಿಸಿದ್ದಾರೆ

* ಎಸ್‌ಯುವಿಯಿಂದ ಉಗ್ರರ ಒಂದು ವಾಕಿಟಾಕಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದ ಒಂದು ಚೀಟಿ ವಶಕ್ಕೆ ಪಡೆಯಲಾಗಿದೆ. ‘ಜೈಷ್‌ ಎ ಮೊಹಮ್ಮದ್‌ ಜಿಂದಾಬಾದ್‌, ಅಫ್ಜಲ್‌ ಗುರು ತ್ಯಾಗಕ್ಕೆ ನಾವು ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಚೀಟಿಯಲ್ಲಿ ಬರೆಯಲಾಗಿತ್ತು

* ಎಸ್‌ಪಿ ಜತೆಗಿದ್ದ ರಾಜೇಶ್‌ ವರ್ಮಾ ಅವರಿಂದ ಕಸಿದುಕೊಂಡಿದ್ದ ₹500ರ ಎರಡು ನೋಟುಗಳು ಉಗ್ರರಲ್ಲಿ ದೊರೆತಿವೆ. ವರ್ಮಾ ಅವರ ಐಫೋನ್‌ ಉಗ್ರರು ಅಡಗಿದ್ದ ಸ್ಥಳದಲ್ಲಿ ಸಿಕ್ಕಿದೆ

* ಉಗ್ರರಲ್ಲಿ ದೊರೆತ ಕತ್ತರಿ ಮತ್ತು ಉಗ್ರರು ಒಳನುಸುಳಲು ಮುಳ್ಳುಬೇಲಿ ಕತ್ತರಿಸಿದ ಅಚ್ಚು ಹೊಂದಿಕೆಯಾಗಿವೆ

* ಉಗ್ರರ ಬಳಿ ದೊರೆತ ಕೈಗವಸು ಮತ್ತು ಟೋಪಿಯ ರೀತಿಯದ್ದೇ ಕೈಗವಸು ಮತ್ತು ಟೋಪಿ ವಾಯುನೆಲೆಯ ಆವರಣ ಬೇಲಿಯಲ್ಲಿ ಸಿಕ್ಕಿದೆ

* ಉಗ್ರರು ಅಡಗಿದ್ದ ಚರಂಡಿಯಲ್ಲಿ ಸಿಕ್ಕ ಬೂಟುಗಳ ಅಚ್ಚು ಮತ್ತು ಉಗ್ರರ ಕಾಲಲ್ಲಿದ್ದ ಬೂಟುಗಳ ಅಚ್ಚು ಹೊಂದಾಣಿಕೆ ಆಗಿದೆ

* ಜನವರಿ 1ರಂದು ಬೆಳಗ್ಗೆ 9.20ಕ್ಕೆ ಉಗ್ರನೊಬ್ಬ 923000957212 ಸಂಖ್ಯೆಗೆ ಕರೆ ಮಾಡಿ ಇತರ ಉಗ್ರರ ಹೆಸರು ತಿಳಿಸಿದ್ದ

* ಮತ್ತೆ ಆತ ಮಹಿಳೆಯೊಬ್ಬರಿಗೆ ಕರೆ ಮಾಡಿದ್ದಾನೆ. ಆಕೆ ತನ್ನ ತಾಯಿ ಎಂದು ಹೇಳಿಕೊಂಡಿದ್ದಾನೆ. ಸುಮಾರು 18 ನಿಮಿಷ ಮಾತನಾಡಿ, ಭಾರತದೊಳಕ್ಕೆ ನುಸುಳಿದ ಮಾಹಿತಿ ನೀಡಿದ್ದಾನೆ.

ದಾಳಿಯ ವಿವರ:
* ಜನವರಿ 2ರಂದು ಬೆಳಗ್ಗೆ 2.35ಕ್ಕೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಗರುಡಾ ಕಮಾಂಡೊಗಳಿಗೆ ಅನುಮಾನಾಸ್ಪದ ಚಲನವಲನ ಕಂಡಿದೆ. 3.20ಕ್ಕೆ ಗುಂಡಿನ ಚಕಮಕಿ ಆರಂಭ

* ಅಡಗಿದ್ದ ಸ್ಥಳದಿಂದ ಓಡುವ ಸಂದರ್ಭದಲ್ಲಿ ಉಗ್ರರು ಕಮಾಂಡೊಗಳತ್ತ ಗ್ರೆನೇಡ್‌ ಎಸೆದಿದ್ದಾರೆ

* ಕಮಾಂಡೊ ಗುರುಸೇವಕ್‌ ಸಿಂಗ್‌ ಹುತಾತ್ಮರಾದರೆ ಇತರ ಇಬ್ಬರು ಗಾಯಗೊಂಡರು. ವಾಯುನೆಲೆಯಲ್ಲಿ ಇದ್ದ ವಾಹನಗಳಿಗೆ ಬೆಂಕಿ ಹಚ್ಚಿ ಉಗ್ರರು ಭೀತಿಯ ವಾತಾವರಣ ಸೃಷ್ಟಿಸಲು ಯತ್ನಿಸಿದ್ದಾರೆ

* ಬೇಕಾಬಿಟ್ಟಿ ಗುಂಡು ಹಾರಾಟ ಮತ್ತು ಗ್ರೆನೇಡ್‌ ದಾಳಿಯಲ್ಲಿ ವಾಯುಪಡೆಯ ನಾಲ್ವರು ಯೋಧ ಹುತಾತ್ಮರಾಗಿ, ಕೆಲವರು ಗಾಯೊಗೊಂಡರು. ಒಬ್ಬ ಯೋಧ ಹುತಾತ್ಮನಾಗುವ ಮೊದಲು ಒಬ್ಬ ಉಗ್ರನನ್ನು ಕೊಂದರು

* ದಟ್ಟ ಮರಗಳಿದ್ದ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಎನ್‌ಎಸ್‌ಜಿ ಮತ್ತು ಸೇನೆಯ ಯೋಧರು ಸುತ್ತುವರಿದು ಜನವರಿ 2ರಂದು ಕೊಂದರು
* ಉಗ್ರರ ದಾಳಿಯಿಂದಾಗಿ ಏಳು ಯೋಧರು ಮೃತಪಟ್ಟು 37 ಮಂದಿ ಗಾಯಗೊಂಡರು

ಮುಫ್ತಿ ಅಬ್ದುಲ್‌ ರವೂಫ್‌ ಅಸ್ಘರ್‌ : ಜೈಷ್‌ನ ಉಪ ಮುಖ್ಯಸ್ಥ, ಅಜರ್‌ನ ಸಹೋದರ
ಶಾಹಿದ್‌ ಲತೀಫ್‌: ಕಾರ್ಯಾಚರಣೆಯ ಕಮಾಂಡರ್‌, ಪಾಕಿಸ್ತಾನದ ಮೊರ್‌ ಅಮೀನಾಬಾದ್‌ನ ನಿವಾಸಿ
ಕಾಶಿಫ್‌ ಜಾನ್‌: ದಾಳಿಯ ನಿರ್ವಾಹಕ, ಪಾಕಿಸ್ತಾನದ ಚರ್ಸಡ ನಿವಾಸಿ

ದಾಳಿ ನಡೆಸಿದ ಉಗ್ರರು: 1) ನಾಸಿರ್‌ ಹುಸೇನ್‌, ಪಾಕಿಸ್ತಾನದ ವೆಹಾರಿ ನಿವಾಸಿ. 2) ಹಾಫಿಜ್‌ ಅಬುಬಕರ್‌, ಪಾಕಿಸ್ತಾನದ ಗುಜ್ರನ್‌ವಾಲಾ ನಿವಾಸಿ. 3) ಉಮರ್‌ ಫಾರೂಕ್‌, ಪಾಕಿಸ್ತಾನದ ಸಂಘರ್‌ ನಿವಾಸಿ. 4) ಅಬ್ದುಲ್‌ ಖಯ್ಯೂಂ, ಪಾಕಿಸ್ತಾನದ ಸುಕ್ಕೂರ್‌ ನಿವಾಸಿ

ಸಾಕ್ಷಿ ಪಟ್ಟಿಯಲ್ಲಿ ಅಮೆರಿಕ ಅಧಿಕಾರಿಗಳು, ಭಯೋತ್ಪಾದಕ
ಜನವರಿ 2ರಂದು ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜೈಲಿನಲ್ಲಿ ಇರುವ ಒಬ್ಬ ಭಯೋತ್ಪಾದಕ, ಆರು ಗೋಪ್ಯ ಸಾಕ್ಷಿಗಳು, ಎಫ್‌ಬಿಐ ಮತ್ತು ಅಮೆರಿಕದ ನ್ಯಾಯಾಂಗ ಇಲಾಖೆಯ ಅಧಿಕಾರಿಗಳನ್ನು ಸಾಕ್ಷಿಗಳು ಎಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದೆ.

ಜೈಷ್‌–ಎ–ಮೊಹಮದ್ ಮುಖ್ಯಸ್ಥ ಮಸೂದ್ ಅಜಹರ್ ಮತ್ತು ಇತರ ಮೂವರನ್ನು ಆಪಾದಿತರು ಎಂದು ಎನ್‌ಐಎ ಹೇಳಿದೆ. ಆಪಾದನೆಯ ಸಮರ್ಥನೆಗೆ ಅಗತ್ಯವಾದ ವೈಜ್ಞಾನಿಕ, ಮೌಖಿಕ ಮತ್ತು ತಾಂತ್ರಿಕ ಪುರಾವೆಗಳನ್ನು ದೋಷಾರೋಪ ಪಟ್ಟಿಯ ಜತೆ ಚಂಡೀಗಡದ ಪಂಚಕುಲ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ಗಲೋಟಿಅಕ್ಲಾನ್ ನಿವಾಸಿ ಮೊಹಮದ್ ಸಾದಿಕ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ಅಬ್ದುಲ್ ರೆಹಮಾನ್ ಅವರನ್ನೂ ಸಾಕ್ಷಿಗಳು ಎಂದು ಹೆಸರಿಸಲಾಗಿದೆ.  ಭಯೋತ್ಪಾದಕರ ಧ್ವನಿ ಮತ್ತು ದಾಳಿಯಲ್ಲಿ ಸತ್ತ ಭಯೋತ್ಪಾದಕರನ್ನು ಗುರುತಿಸಲು ಈ ಇಬ್ಬರು ನೆರವಾಗಿದ್ದಾರೆ. ವಾಯು ನೆಲೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಏಳು ಜನ ಸತ್ತು 37 ಜನರು ಗಾಯಗೊಂಡಿದ್ದರು.

ಆರು ಸಾಕ್ಷಿಗಳ ಹೇಳಿಕೆಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಎನ್ಐಎ ಅಧಿಕಾರಿಗಳು, ಈ ಸಾಕ್ಷಿಗಳ ಹೆಸರನ್ನು ಗೋಪ್ಯವಾಗಿ ಇರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸಾಕ್ಷಿಗಳಿಗೆ ರಕ್ಷಣೆ ನೀಡಬೇಕಾಗಿರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸಬಾರದು ಎಂದು ಕೋರಲಾಗಿದೆ.ಪಠಾಣ್‌ಕೋಟ್ ದಾಳಿಯ ಹೊಣೆಯನ್ನು ಹೊತ್ತು, ಅದಕ್ಕೆ ಸಂಬಂಧಿಸಿದ ಧ್ವನಿಮುದ್ರಿಕೆಯನ್ನು ಜೈಷ್‌–ಎ– ಮೊಹಮ್ಮದ್ ಸಂಘಟನೆಯ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿತ್ತು. ಇದನ್ನು ಪತ್ತೆ ಮಾಡಲು ನೆರವಾದ ಅಮೆರಿಕ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮತ್ತು ಎಫ್‌ಬಿಐ ವಿಶೇಷ ಏಜೆಂಟ್‌ ಹೆಸರನ್ನು ಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್‌ಸಿಂಗ್, ಅವರ ಬಾಣಸಿಗ ಮದನ್ ಗೋಪಾಲ ಮತ್ತು ಸ್ನೇಹಿತ ಆಭರಣದ ವ್ಯಾಪಾರಿ ರಾಜೇಶ್ ವರ್ಮಾ ಅವರ ಹೆಸರು ಸಾಕ್ಷಿಗಳ ಪಟ್ಟಿಯಲ್ಲಿ ಇಲ್ಲ. ಈ ಮೂವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಪಹರಿಸಿ ನಂತರ ಸಲ್ವಿಂದರ್ ಸಿಂಗ್ ಮತ್ತು ಮದನ್ ಗೋಪಾಲ್ ಅವರನ್ನು ಕಾಡಿನಲ್ಲಿ ಬಿಟ್ಟಿದ್ದ ಭಯೋತ್ಪಾದಕರು, ವರ್ಮಾ ಅವರ ಕತ್ತನ್ನು ಸೀಳಿದ್ದರು. ಭಯೋತ್ಪಾದಕರು ತಮ್ಮನ್ನು ಬಿಟ್ಟುಹೋದ ನಂತರ ವರ್ಮಾ, ವೈದ್ಯಕೀಯ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.