ನವದೆಹಲಿ (ಪಿಟಿಐ): ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ ಪ್ರಯಾಣದ ಭತ್ಯೆ ಪಡೆಯಲು ಟಿಕೆಟ್ (ಬೋರ್ಡಿಂಗ್ ಪಾಸ್) ಸಲ್ಲಿಸುವುದು ಕಡ್ಡಾಯ ಎಂಬ ತನ್ನ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.
ಪ್ರಯಾಣ ಭತ್ಯೆ ನಗದೀಕರಿಸುವ ವೇಳೆ ಪ್ರಯಾಣದ ಟಿಕೆಟ್ ಮೂಲಪ್ರತಿಯನ್ನು ಸಲ್ಲಿಸುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ ಭತ್ಯೆ ನಗದೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಆದೇಶದಲ್ಲಿ ತಿಳಿಸಿದೆ.
ಆದರೆ ಸಂಬಂಧಿತ ಅಧಿಕಾರಿಯು ಪ್ರಯಾಣ ಕೈಗೊಂಡ ಬಗ್ಗೆ ಪತ್ರವನ್ನು ಸಲ್ಲಿಸಬೇಕು. ಉಳಿದಂತೆ ಪ್ರಯಾಣಭತ್ಯೆ ನಗದೀಕರಣಕ್ಕೆ ಸಂಬಂಧಪಟ್ಟ ಇತರ ಪ್ರಕ್ರಿಯೆಗಳು ಯಥಾಸ್ಥಿತಿ ಮುಂದುವರಿಯಲಿವೆ. ಪ್ರವಾಸ ಕೈಗೊಂಡಿರುವ ಬಗ್ಗೆ ಸಂದೇಹ ಬಂದಲ್ಲಿ ಪ್ರಯಾಣ ಭತ್ಯೆ ಮಂಜೂರು ಮಾಡುವ ಅಧಿಕಾರಿಯು ಪ್ರಯಾಣ ಮಾಡಿರುವುದು ಹೌದೇ ಎಂಬುದನ್ನು ಪರಿಶೀಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಲಾಖಾ ಕೆಲಸಕ್ಕೆ ಸಂಬಂಧಿಸಿ ವಿಮಾನ ಯಾನ ಕೈಗೊಳ್ಳಬೇಕಾದಾಗ ಇಲಾಖೆಯಿಂದ ಮಾನ್ಯತೆ ಪಡೆದ, ಬಾಲ್ಮರ್ ಲಾರಿ ಅಂಡ್ ಕಂಪೆನಿಯಿಂದಲೇ ಟಿಕೆಟ್ ಖರೀದಿಸಬೇಕು. ಅಗ್ಗದ ದರದ ವಿಮಾನದಲ್ಲೇ ಪ್ರಯಾಣಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಏರ್ ಇಂಡಿಯಾ ಸಂಸ್ಥೆಯಲ್ಲಿ ಅಗ್ಗದ ದರದ ಟಿಕೆಟ್ ಲಭ್ಯವಿದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿವರಿಸಲಾಗಿದೆ.
ಹೆಚ್ಚು ವಿಮಾನ ಪ್ರಯಾಣ ನಡೆಸುವವರಿಗೆ ದೊರೆಯುವ ‘ರಿವಾರ್ಡ್ ಪಾಯಿಂಟ್’ಗಳನ್ನು ಅಧಿಕೃತ ಪ್ರವಾಸಕ್ಕೇ ಬಳಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.