ಹೈದರಾಬಾದ್ (ಪಿಟಿಐ): ಮತಕ್ಕಾಗಿ ಲಂಚ ಪ್ರಕರಣ ಸಂಬಂಧ ತೆಲಂಗಾಣ ಭ್ರಷ್ಟಾಚಾರ ವಿರೋಧಿ ದಳವು, ಟಿಡಿಪಿ ಶಾಸಕ ಎ.ರೇವಂತ್ ರೆಡ್ಡಿ ಹಾಗೂ ಇತರ ಮೂವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ಪ್ರಾಥಮಿಕ ದೋಷಾರೋಪ ಪಟ್ಟಿ ದಾಖಲಿಸಿದೆ.
ರೇವಂತ್ ರೆಡ್ಡಿ ಅವರಲ್ಲದೇ, ಬಿಷಪ್ ಸೆಬಾಸ್ಟಿಯನ್ ಹ್ಯಾರಿ, ರೆಡ್ಡಿ ಆಪ್ತ ಉದಯ್ ಸಿಂಹ ಜಾಗೂ ಎಂ.ಜೆರುಸಲೇಂ ವಿರುದ್ಧ ಸಿಆರ್ಪಿಸಿಯ ವಿವಿಧ ಹಾಗೂ ಐಪಿಸಿಯ120ಬಿ ಕಲಂ ಅಡಿಯಲ್ಲಿ ಚಾರ್ಜ್ಶೀಟ್ ದಾಖಲಿಸಲಾಗಿದೆ.
39 ಸಾಕ್ಷ್ಯಗಳನ್ನು ಹಾಗೂ ಹಲವು ಪುರಾವೆಗಳನ್ನು ದೋಷಾರೋಪ ಪಟ್ಟಿ ಒಳಗೊಂಡಿದೆ.
‘ನಾವು ತನಿಖೆಯನ್ನು ಮುಂದುವರಿಸಿದ್ದೇವೆ. ಟಿಡಿಪಿಯ ಮತ್ತೊಬ್ಬ ಶಾಸಕ ಸಂದ್ರ ವೆಂಕಟ್ ವೀರಯ್ಯ ಹಾಗೂ ಇತರರ ವಿರುದ್ಧ ನಾವು ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ’ ಎಂದು ಎಸಿಬಿ ಹೆಚ್ಚುವರಿ ಪೊಲೀಸ್ವರಿಷ್ಠಾಧಿಕಾರಿ ಎಂ.ಮಲ್ಲಾ ರೆಡ್ಡಿ ತಿಳಿಸಿದ್ದಾರೆ.
ಏನಿದು ಘಟನೆ?: ತೆಲಂಗಾಣ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಜೂನ್ 1ರಂದು ನಡೆದ ಎಂ.ಎಲ್.ಸಿ ಚುನಾವಣೆಯಲ್ಲಿ ಟಿಡಿಪಿ ಪರ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ರೇವಂತ್ ರೆಡ್ಡಿ ಅವರು ತಮಗೆ ಐದು ಕೋಟಿ ರೂಪಾಯಿ ಲಂಚದ ಆಮೀಷ ಒಡ್ಡಿದ್ದರು ಎಂದು ಆರೋಪಿಸಿ ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್ ಅವರು ಎಸಿಬಿಗೆ ದೂರು ನೀಡಿದ್ದರು.
ಸ್ಟೀಫನ್ಸನ್ ಅವರು ತೆಲಂಗಾಣ ವಿಧಾನಸಭೆಯಲ್ಲಿ ಇಂಡೋ–ಆಂಗ್ಲೋ ಸಮುದಾಯವನ್ನು ಪ್ರತಿನಿಧಿಸುತ್ತಾರೆ.
ಈ ಸಂಬಂಧ ಮೇ 31ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ, ತೆಲಂಗಾಣ ವಿಧಾನಸಭೆಯಲ್ಲಿ ಟಿಡಿಪಿಯ ಉಪಸಭಾ ನಾಯಕ ರೇವಂತ್ ರೆಡ್ಡಿ ಸೇರಿದಂತೆ ಹಲವರನ್ನು ಬಂಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.