ಅಗರ್ತಲಾ: ತ್ರಿಪುರಾದ ಮುಖ್ಯಮಂತ್ರಿಯಾಗಿ ವಿಪ್ಲವ್ ಕುಮಾರ್ ದೇವ್ ಮತ್ತು ಉಪ ಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ಬರ್ಮನ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಅಸ್ಸಾಂ ರೈಫಲ್ಸ್ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ್ ರಾಯ್ ಪ್ರಮಾಣ ವಚನ ಬೋಧಿಸಿದರು.
ಬಿಜೆಪಿಯ ಐವರು ಮತ್ತು ಮಿತ್ರಪಕ್ಷ ಐಪಿಎಫ್ಟಿಯ ಇಬ್ಬರು ಸೇರಿ ಏಳು ಸಚಿವರ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಐಪಿಎಫ್ಟಿ ಮುಖ್ಯಸ್ಥ ಎನ್.ಸಿ. ದೇವ್ ಬರ್ಮನ್ ಮತ್ತು ಒಬ್ಬ ಮಹಿಳೆ ಸಂಪುಟದಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮತ್ತು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭಕ್ಕೆ ಸಾಕ್ಷಿಯಾದರು.
‘ತ್ರಿಪುರಾದಲ್ಲಿ ಬದಲಾವಣೆಯ ಹೊಸ ಗಾಳಿ ಬೀಸ ತೊಡಗಿದ್ದು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದರೊಂದಿಗೆ ಜನರ ಜೀವನ ಬದಲಾಯಿಸಬೇಕಿದೆ. ಆ ದಿಸೆಯಲ್ಲಿ ಹೊಸ ಸರ್ಕಾರಕ್ಕೆ ಕೇಂದ್ರ ಅಗತ್ಯ ಸಹಾಯ, ಸಹಕಾರ ನೀಡಲಿದೆ’ ಮೋದಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.